ರಂಗಪ್ರಯೋಗವಾಗಿ ಅರಳಿದ ಕಥಾಖಂಡ.
ನಾಟಕ ಬೆಂಗ್ಳೂರಿನ ಪ್ರದರ್ಶನದ ಭಾಗವಾಗಿ ಜನವರಿ ೬ಕ್ಕೆ ಪ್ರಕಸಂ ತಂಡ ಆರು ಖಂಡದ ಆರು ಬರಹಗಾರರ ಸಣ್ಣಕಥೆಗಳನ್ನು ಒಂದು ನಾಟಕವನ್ನಾಗಿ ಮಾಡುವ ಸಾಹಾಸಕ್ಕೆ ಕೈ ಹಾಕಿ ಅದನ್ನು ಕಥಾಖಂಡ ಅಂತ ಆಡಿದರು. ಪೋಸ್ಟರಿನಲ್ಲಿ ನಾಟಕಕ್ಕೆ ಸಂಭಂದಿಸಿದ ಯಾವುದಾದರು ಸಾಂಕೇತಿಕ ಚಿತ್ರವನ್ನು ಬಳಸುವ ಬದಲು (ಹೆಚ್ಚಿನ ನಾಟಕದ ಪೋಸ್ಟರ್ಗಳು ಇದೇ ತೆರನಾದ್ದಾಗಿರುತ್ತದೆ), ಆರು ಬರಹಗಾರರ ಚಿತ್ರಗಳನ್ನು ಹಾಕಿ ಪೋಸ್ಟರ್ ಮಾಡಿರುವುದು ಕೆಲವರಿಗೆ ವಿಭಿನ್ನ ಮತ್ತು ಇನ್ನು ಕೆಲವರಿಗೆ ಇವರಾರು ಅನ್ನುವ ತಲೆಕೆರೆತವಾಗಿ, ಹೆಚ್ಚಿನ ಸಮಜಾಯಿಷಿ ಕೇಳದೆ ಸುಮ್ಮನಾದರು. ಇಂಗ್ಲಿಷ್ ಸಾಹಿತ್ಯದ ಓದಿನವರಿಗೆ ಟಾಲಸ್ಟಾಯ್ ಮತ್ತು ಮಾರ್ಕ ಟೈನ್ರ ಮುಖ ಕೊಂಚ ಪರಿಚಿತವಾಗಿದ್ದಿರಬಹದು. ಆದರೆ ನಮಗೆ ಅಷ್ಟಾಗಿ ಕನೆಕ್ಟ್ ಆಗುತ್ತಿಲ್ಲ ಅಂತ ಮತಾಡುತ್ತಿರಬೇಕಾದರೆ, ಎಂಟನೇ ಮತ್ತು ಒಂಬತ್ತನೇ ತರಗತಿಯ ಒಂದಷ್ಟು ಮಕ್ಕಳು ‘ಏ ಚಿನುವಾ ಅಚಿಬೆ’ ಅಂತ ಉದ್ಘಾರ ತೆಗೆದರು. ಉಳಿದ ಸಾಹಿತಿಗಳನ್ನು ಗುರುತಿಸುವ ಮಕ್ಕಳ ಸಹಜ ಕುತೂಹಲವನ್ನೂ ತೋರಿಸಿದರು. ಈ ನಾಟಕದ ಉದ್ದೇಶಿತ ಪ್ರೇಕ್ಷಕರು ನಾವಲ್ಲವೇನೊ ಅನ್ನುವ ಅನುಮಾನ ಮತ್ತು ಸಮಾಧಾನದಿಂದಲೇ ಆಟ ನೋಡಿದೆವು.
ತುಂಬ ಹಿಂದೆ ‘ಏವಂ ಇಂದ್ರಜೀತ್’ ಅನ್ನುವ ನಾಟಕವನ್ನು ಬಾದಲ್ ಸರ್ಕಾರ್ ಬರೆದು ಆಡಿಸಿದಾಗ ತುಂಬ ಸಂಚಲನವನ್ನು ಉಂಟು ಮಾಡಿತು. ನಾಟಕದ ಮೂರಂಕದ ಪರಿಕಲ್ಪನೆ ಅಥವ ಕಂಪನಿ ನಾಟಕದ ಖಗ್ರಾಸ ಪೂರ್ಣ ಕಥಾನಕದ ರಸದೌತಣವನ್ನು ಉಣಬಡಿಸುವ ಕ್ರಮದಿಂದ ದೂರ ಸರಿದು ನಾಟಕ ಕಟ್ಟಿದ ಕ್ರಮಕ್ಕೆ, ಅಂದು ತುಂಬ ಪ್ರಶಂಸೆ, ವಿಮರ್ಶೆ, ಬಯ್ಗುಳಗಳು ದೊರೆತಿದ್ದವು. ಆದರೆ ಕಾಲನ ಕಾಲದ ಹೊಡೆತವನ್ನು ಇಂದ್ರಜೀತ್ ಸಹಿಸಿ ಬೆಳೆದಿದೆ. ನಿರ್ದೇಶಕ ಪಿ.ಡಿ.ಸತೀಶ್ಚಂದ್ರ್ ಇಂತಹದ್ದೇ ಒಂದು, ಮಿಕ್ಕು ಮೀರಿ ಹೋಗುವ ಗೊರವನ ಹಿಡಿಯುವ ಹುಕ್ಕಿಗೆ ಒಳಗಾದರಾ? ಅಂತ ಅನುಮಾನ ಬಂದಿತು.
ಮೊದಲಿಗೆ ಸೂತ್ರಧಾರ ಬಂದು ಶಿವನೇ ಮೊದಲ ಕಥೇಗಾರನೆಂದು ಹೇಳಿ ಶುರು ಮಾಡಿದ್ದು ಇತ್ತೀಚಿನ ಸೋಷಿಯೋ-ಪಾಲಿಟಿಕಲ್ ವಾತಾವರಣಕ್ಕೆ ಮಣಿದು ಆಡದ ಮಾತು ಅಂತನಿಸಿತು. ಪ್ರತಿ ಕಥೆಗೂ ಮುಂಚೆ ಸೂತ್ರಧಾರ ಬಂದು ಬರಹಗಾರರ ಬಗ್ಗೆ ಹೇಳಿದ್ದು ಯಾವ್ಯಾವ ಕಥೆ ಯರ್ಯಾರು ಬರೆದಿದ್ದು ಅಂತ ತಿಳಿಯಲು ಸಹಾಯವಾಯ್ತು. ಆದರೆ ಅದು ಬಿಟ್ಟರೆ ಅತ್ಯಂತ ಸರಳ ರಂಗಸಜ್ಜಿಕೆ ಇದ್ದ ನಾಟಕದಲ್ಲಿ ಇನ್ನೇನೂ ಅಷ್ಟು ಸರಳವಾಗಿರಲಿಲ್ಲ. ಒಂದೇ ಸಮವಸ್ತç ಧರಿಸಿದ ಎಲ್ಲ ನಟರು ಆರು ಕಥೆಗಳಲ್ಲಿ ವಿಬಿನ್ನ ಪಾತ್ರಗಳನ್ನು ಮಾಡುತ್ತ ಇದ್ದರು. ಪಾತ್ರಗಳ ಮತ್ತು ಕಥೆಗಳ ಬರ್ಮೆಯನ್ನು ಒತ್ತಿ ಹೇಳಲು ಪರಿಕರಗಳನ್ನೂ ಬೇರೆ ಬಳಸಲಿಲ್ಲ. ಆದರೂ ಕಥೆ ಪ್ರೇಕ್ಷಕರಿಗೆ ದಾಟುತ್ತಿತ್ತು. ಜಾನಪದ ಕಥೆಯಂತೆ. ಮೊದಲಿಗೆ ಬೇರೆ ಬೇರೆ ಖಂಡದ ರೀತಿರಿವಾಜುಗಳನ್ನು ದಾಖಲಿಸಬಾರದೆ ಅಂತ ಅನಿಸಿದರೂ, ಸಮವಸ್ತçಧಾರಿ ನಟರು ಈ ಕಥೆಗಳು ಹೆಸರಿಗಷ್ಟೆ ಬೇರೆ ಬೇರೆ ಖಂಡದ್ದು, ಇಲ್ಲವೆಂದರೆ, ಬರಿ ಕಥೆ ಕೇಳಿದರೆ, ಇದು ನಮ್ಮಜ್ಜಿ ಹೇಳುತ್ತಿದ್ದ ಕಥೆಗಳಂತೆ ಅಂತ ಭಾಸ ಪಡಿಸಿದರು. ದೇಶ ಯಾವುದಾದರೂ ಬದುಕಿನ ಪಾಠ, ಸ್ಪಂದನೆ ಒಂದೇ ಅಂತ ಸಾರುವಲ್ಲಿಈ ಜಾಣ ವಸ್ತ್ರವಿನ್ಯಾಸದ ನಿರ್ಧಾರ ಗೆದ್ದಿತು. ಟಾಲಸ್ಟಾಯ್ ಬರೆದ ಕಥೆ ‘ಐವನ್ ದಿ ಫೂಲ್’ಯಿಂದ ಪ್ರಾರಂಭವಾದ ನಾಟಕ, ನಂತರ ಎಲಿಜಬೆತ್ ಜಾಲಿ ಬರೆದ ‘ಎ ಜಂಟಲ್ಮೆನ್ಸ್ ಅಗ್ರೀಮೆಂಟ್’ಗೆ ದಾರಿ ಮಾಡಿ ಕೊಟ್ಟು, ಆಫ್ರಿಕಾದ ಕಿಟಿಪ್ಪಾನ ಪರಿಚಯಿಸುವ ಚಿನುವ ಅಚಿಬೆ ಬರೆದ ‘ದಿ ಸ್ಯಾಕ್ರಿಫಿಷಿಯಲ್ ಎಗ್’ಗೆ ಖೋ ಕೊಟ್ಟು, ರೋವಾಲ್ಡ್ ಡಾಲ್ ಬರೆದ ‘ದಿ ವಂಡರಫುಲ್ ಸ್ಟೋರಿ ಆಫ್ ಹೆನ್ರಿ ಶುಗರ್’ಗೆ ರಿಲೆ ಪಾಸ್ ಮಾಡಿ, ಪ್ರಾಣಿಗಳೇ ಪಾತ್ರವಾಗಿದ್ದ ಮಾಯನ ನಾಗರಿತೆಯ ಜನಪದ ಕಥೆ ಕಣ್ಣಾಲಿಗಳಲ್ಲಿ ನೀರಾಡಿಸಿ ಕೊನೆಗೆ ಮಾರ್ಕ ಟ್ವೈನ್ ಬರೆದ ತುಂಟ ಟಾಮ್ ಸಾಯರ್ನ ಕೆಲಸಗಳ್ಳತನ ಎಲ್ಲರಿಗೂ ನಗು ತರಿಸಿತು. ಆಫ್ರಿಕಾದ ಕಥೆ ಅಸಂಗತವಾಗಿದ್ದರೂ ನಮ್ಮ ನೆಲಮೂಲದ ದೈವಗಳ ಸಿಟ್ಟು ದುಮ್ಮಾನಗಳು ನೆನೆಪಸಿದ್ದಂತು ದಿಟ.
ನಾಟಕ ಹಂತ ಹಂತವಾಗಿ ಅನಾವರಣಗೊಂಡರೂ ಇದನ್ನು ಇಡಿಯಾಗಿ ಅದರ ಆಶಯದಿಂದ ವಿಮುಖವಾಗಿ ನೋಡಲು ಸಾಧ್ಯವಿಲ್ಲ. ಹುಟ್ಟುವ ಎಲ್ಲ ಮಕ್ಕಳು ವಿಶ್ವಮಾನವರು ಅಂತ ಕುವೆಂಪುರವರು ಸಾರಿದಾಗ ಅದ್ಯಾವುದೋ ಮಹತ್ತರವಾದ ತತ್ವಜ್ಞಾನ ಅಂತ ನಮ್ಮಂತವರಿಗೆ ಮೊದಲಿಗೆ ಅನಿಸಿತ್ತಾದರೂ, ಕಥಾಖಂಡದಂತಹ ಪ್ರಯೋಗಗಳು ಹೇಗೆ ವೇಷಭೂಷಣಗಳು ಮತ್ತು ಆಡುವ ನುಡಗಳು ಬೇರೆ ಅಷ್ಟೆ. ಕಥೆ ಕೇಳಲು ಕುಳಿತಾಗ ನಾವೆಲ್ಲರೂ ವಿಶ್ವಮಾನವ ಮಕ್ಕಳೆ ಅಂತ ಅನುಭವಕ್ಕೆ ಬರುವ ಹಾಗೆ ಮಾಡುತ್ತದೆ. ನಟರಲ್ಲಿ ತಾಲೀಮು ಇನ್ನೂ ಬೇಕು ಅಂತ ಅನಿಸಿತು. ಮೊದಲ ಪ್ರಯೋಗವಾದ್ದರಿಂದ ಟೈಮಿಂಗ್ ಗಟ್ಟಿಯಗಲು ಇನ್ನಷ್ಟು ಪ್ರದರ್ಶನಗಳೂ ಆಗಬೇಕು. ಕೊನೆಗೆ ಬಂದ ನಿರ್ದೇಶಕರು ಇದು ಶಾಲೆಗಳಲ್ಲಿ ಪ್ರಯೋಗ ಮಾಡುವ ದೃಷ್ಟಿಯಿಂದ ತುಂಬ ‘ಮಿನಿಮಲಸ್ಟಿಕ್ ಕ್ರಾಫ್ಟ್’ಲ್ಲಿ ನಾಟಕವನ್ನು ಕಟ್ಟಿದ್ದೀವಿ ಅಂತ ಆದಾಗ ಪ್ರಯೋಗದ ಕುರಿತಾಗಿ ಇದ್ದ ಹಲವು ಪ್ರಶ್ನೆಗಳು ಬಗೆಹರಿದುಕೊಂಡವು. ಇಂತಹ ಪ್ರಯೋಗಕ್ಕೆ ಬೆಳಕಿನ ಹಂಗೂ ಬೇಕಿರಲ್ಲ. ಅದಕ್ಕೆ, ಮೊದಲು ಬಾದಲ್ ಸರ್ಕಾರರ ಆಶಯದ ಬಗ್ಗೆ ಪ್ರಸ್ತಾಪಿಸಿದ್ದು.
ನಟರಲ್ಲಿ ಶ್ರೀಹರಿ ಕಶ್ಯಪ್ ಹಾಗು ಸಂತೋಷ ಕರ್ಕಿ ಗಮನ ಸೆಳದರು. ಆರು ಕಥೆಗಳನ್ನು ರಂಗರೂಪವಾಗಿಸಿದ ಚಂದನ್ ಶಂಕರ್ ವೇದಿಕೆ ಮೇಲೆ ಬಂದಾಗ ತಂಡದವರೆಲ್ಲ ತುಂಬಾ ಉತ್ಸಾಹದಿಂದ ಅವರನ್ನು ಶ್ಲಾಘಿಸಿದ್ದು (ನಿರ್ದೇಶಕರಿಗಿಂತಲೂ ಹೆಚ್ಚಾಗಿ), ಕಾಲೇಜುಗಳಲ್ಲಿ ಮಕ್ಕಳ ಮೆಚ್ಚಿನ ಮೇಷ್ಟ್ರ ಸಾಂಗತ್ಯದಲ್ಲಿ ಪಡುವ ಒಳಸಂಭಮ್ರದಂತಿತ್ತು. ಮಕ್ಕಳಿಗೆ ನಾಟಕ ಮಾಡುವಂತವರು ತಮ್ಮೊಳಗಿನ ಮಗುವನ್ನು ಕಳೆದುಕೊಳ್ಳಬಾರದು ಅನ್ನುವದನ್ನು ಇದು ನೆನಪಿಸಿತು. ಮಕ್ಕಳಲ್ಲಿ ಹೆಚ್ಚಿನ ರಂಗಾಸಕ್ತಿ ಮೂಡಲು ಮತ್ತು ಇದೇ ತಂಡದ ಕಸುಬುಗಾರಿಕೆ ತುಕ್ಕು ಹಿಡಿಯದಿರಲು. ಕಥಾಖಂಡ ಹೆಚ್ಚು ಹೆಚ್ಚು ಪ್ರದರ್ಶನವಾಗಬೇಕು.
Comments
Post a Comment