Chetana Thirthahalli |
ಯಾವ ಯಾವುದೋ ಅನುಭವಗಳು ಕ್ಷಣದಲ್ಲಿ ಕಿಡಿ ಹೊತ್ತಿಸಿದಂತಾಗಿ ಅಕ್ಷರ ರೂಪ ತಳೆದಿದ್ದವು. ಅವನ್ನು ಅಲೈನ್ ಮಾಡುವ ರೀತಿಯಿಂದ ಕವಿತೆ ಎನ್ನುವ ಹೆಸರನ್ನೂ ಪಡೆದಿದ್ದವು. ಇವೇ ಸಾಲುಗಳನ್ನು ಮತ್ಯಾವಾಗಲೋ ಓದಿದಾಗ ಮತ್ತೊಂದೇ ಅರ್ಥ ಅಲ್ಲಿರುತ್ತಿತ್ತು. ಬರೆಯುವಾಗಿನ ಭಾವದ ಬದಲು ಬೇರೊಂದು ಅಲ್ಲಿ ಕಾಣುತ್ತಿತ್ತು. ಹಾಗೆಯೇ ಅವನ್ನು ಓದಿದ ಕೆಲವರು ತಮ್ಮ ಅರ್ಥಗಳನ್ನು ಶೇರ್ ಮಾಡಿಕೊಂಡಿದ್ದುಂಟು. ಬಹುತೇಕ ಈ ಎಲ್ಲ ಕವಿತೆಗಳು ಸಂಬಂಧಗಳ ಜಾಲದ ತುಣುಕುಗಳೇ ಆಗಿದ್ದವು. ಹೊತ್ತು ಹೊತ್ತಲ್ಲೆ ಫೇಸ್ಬುಕ್ನಲ್ಲಿ ಸ್ಟೇಟಸ್ ಆಗಿ ಕಾಣಿಸಿಕೊಂಡಿದ್ದ ಈ ಕವಿತೆಗಳಲ್ಲಿ ಕೆಲವಕ್ಕೆ ಗೆಳೆಯ, ರಂಗಭೂಮಿಯಲ್ಲಿ ಸಾಕಷ್ಟು ಪರಿಶ್ರಮವಿರುವ ಪಿ.ಡಿ. ಸತೀಶ್ ತಮಾಷೆಗೆಂದು ’ಪ್ರತಿ ಕವಿತೆ’ಗಳನ್ನು ಬರೆದರು. ಹೀಗೆ ಹುಟ್ಟಿಕೊಂಡ ಕಾವ್ಯಸಂಭಾಷಣೆಯೇ ನಾಟಕ ರೂಪಿಸುವ ಯೋಚನೆಗೆ ಪ್ರೇರಣೆಯಾಯ್ತು.
ಅಚ್ಚರಿಯೆಂಬಂತೆ ಆಯ್ದ ಎಪ್ಪತ್ತನಾಲ್ಕು ಕವಿತೆಗಳಿಗೆ ಸತೀಶ್ ಪ್ರತಿಕವಿತೆಗಳನ್ನು ಬರೆದಿದ್ದಾರೆ. ಈ ಪ್ರತಿಕವಿತೆಗಳು ಬದುಕನ್ನು ಕಾಣಬೇಕಾದ ಬಗೆಯನ್ನು ನಿರ್ದೇಶಿಸುವಂತಿವೆ. ಕ್ಷಣಿಕ ಭಾವನೆಗಳನ್ನು ಬೆನ್ನ ಮೇಲೆ ಹೊತ್ತು ನೋವನ್ನೆ ಸುಖಿಸುವ ಸ್ವಾನುಕಂಪದ ಮನಸ್ಸುಗಳಿಗೆ ಈ ಪ್ರತಿಕವಿತೆಗಳು ಮದ್ದಿನಂತಿವೆ. ಜೀವನದ ನೈಜತೆ ಎಲ್ಲವನ್ನೂ ಒಪ್ಪಿಕೊಂಡು ಜೊತೆಯಾಗಿ ಹರಿಯುವ ಸಂತಸದಲ್ಲಿದೆಯೇ ಹೊರತು ನಿಂತಲ್ಲೆ ಕೊಳಯುವ ದುಃಖದಲ್ಲಿ ಅಲ್ಲ ಎನ್ನುವುದನ್ನು ಮನ ಮುಟ್ಟಿಸುತ್ತವೆ.
ಈ ಅಂಶಗಳನ್ನು ಮಾತಾಗಿಸದೆ ಕವಿತೆಯಲ್ಲೆ ಸಂಭಾಷಿಸುವ ನಿರ್ಧಾರ ಕೂಡ ಉದ್ದೇಶಪೂರ್ವಕವೇ. ಗದ್ಯದಲ್ಲಿ ಒಂದು ಪುಟದಷ್ಟು ಹೇಳುವುದನ್ನು ಕಾವ್ಯ ಕೆಲವೇ ಸಾಲುಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲದು. ಅಲ್ಲದೆ ನಾಟಕ ನೋಡುವ ಪ್ರಕ್ರಿಯೆಯಲ್ಲಿ ಕೇಳುವ ಕ್ರಿಯೆಯೂ ಸೇರಿ ಸಂಪೂರ್ಣ ಒಳಗೊಳ್ಳುವಿಕೆ ಸಾಧ್ಯವಾಗುವುದು. ಇದು ಹೊಸ ಅನುಭವವನ್ನು ಪ್ರೇಕ್ಷಕರಿಗೆ ಒದಗಿಸುವುದು. ಕವಿತೆಗಳನ್ನು ದೃಶ್ಯ ಮಾಧ್ಯಮಕ್ಕೆ ಒಳಪಡಿಸಿದಾಗ, ನಟರ ಅಭಿನಯದ ಮೂಲಕ ಸಂವಹಿಸಿದಾಗ ನೊಡುಗ / ಕೇಳುಗರಲ್ಲಿ ಅವರದೇ ಆದ ಮತ್ತೊಂದು ಅರ್ಥ ಸ್ಫುರಣೆಯೂ ಸಾಧ್ಯವಾಗಬಹುದು. ಇಂತಹ ಸಾಧ್ಯತೆಗಳೇ ಒಂದು ಪ್ರಯತ್ನವನ್ನು ಯಶಸ್ವಿಯಾಗಿಸುತ್ತದೆಯಲ್ಲವೆ?
ಪಿ.ಡಿ.ಸತೀಶ್, ಪ್ರಕಸಂ ವತಿಯಿಂದ ಈ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಮೂಲ ಕವಿತೆಗಳ ಬರಹಗಾರ್ತಿಯಾಗಿ ನಾನು ನಿಮಿತ್ತ ಮಾತ್ರ. "ಕೊನೆಗೂ ಉಳಿಯುವುದು ಎಲ್ಲ ಸಂಕೀರ್ಣತೆಗಳನ್ನು ದಾಟಿ ನಿಲ್ಲುವ ಸಂಬಂಧಗಳಷ್ಟೆ" ಎಂದು ಸಾರಲು ಹೊರಟಿರುವ ’ಅವಳವನು ಅವನವಳು’ ನಾಟಕ ಬಿಡಿ ಕವಿತೆಗಳನ್ನೆ ಸಂಭಾಷಣೆಯಾಗುಳ್ಳ ಮೊಟ್ಟ ಮೊದಲ ನಾಟಕ ಎಂಬ ಅಡಿ ಬರಹವನ್ನೂ ಹೊತ್ತುಕೊಂಡಿದೆ.
ಚೇತನಾ ತೀರ್ಥಹಳ್ಳಿ.
Comments
Post a Comment