"ಅವಳವನು ಅವನವಳು" ಚೊಚ್ಚಲ ಪ್ರದರ್ಶನ
ಕವನಗಳೇ ಮಾತಾಗಿ, ಸಂಕಲನವೇ ನಾಟಕವಾದ ಪ್ರಕಸಂನ ೧೨ನೇ ಪ್ರಯೋಗ
![]() |
Promo picture... |
ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧಗಳ ವಿವಿಧ ಮಜಲುಗಳ ಕವನಾತ್ಮಕ ಸಂಯೋಗವೇ ಈ ನಾಟಕದ ಜೀವಾಳ. ವೇದಕಾಲದ ನಾಲ್ಕು ಆಶ್ರಮಗಳನ್ನು ನಾವು ನಾಲ್ಕು ಜೋಡಿಗಳಾಗಿ, ನಮ್ಮ ಕವನಗಳನ್ನು ರಂಗದ ಮೇಲೆ ಓದಲು ಬಳಸಿಕೊಂಡಿದ್ದೇವೆ. ಯೌವನ, ಗ್ರಹಸ್ಥ, ವಾನಪ್ರಸ್ಥ ಹಾಗು ಸನ್ಯಾಶಾಶ್ರಮಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಗಿವೆ. ನಾವು ಅಲೌಕಿಕವಾಗಿ ಈ ಆಶ್ರಮಗಳನ್ನ ಪ್ರತಿದಿನವೂ ಅನುಭವಿಸುತ್ತೇವೆ. ಈ ಅನುಭವಗಳನ್ನು ಕೂಡಿಸಿ, ಗುಣಿಸಿ, ಭಾಗಿಸಿ ನಮ್ಮ ಕವನಗಳನ್ನು ರಚಿಸಿದ್ದೇವೆ.
ಸಂಬಂಧಗಳನ್ನು ಆಧರಿಸಿ ಈಗಾಗಲೇ ಅನೇಕ ನಾಟಕಗಳು, ಕಥೆ ಹಾಗು ಕವನಸಂಕಲನಗಳು ಹೊರಬಂದಿವೆ. ನಮ್ಮ ನಾಟಕಗಳಲ್ಲಿ ಇವೆಲ್ಲದರ ಒಟ್ಟು ಅನುಭವಗಳನ್ನು ಹೊಸ ರೀತಿಯಲ್ಲಿ ಸಾದರಪಡಿಸಿದ್ದೇವೆ. ವಿವಿಧ ಮಜಲುಗಳಾದ ಸ್ನೇಹ, ಪ್ರೀತಿ, ಸಾವು, ಭವಿಷ್ಯ, ಜೀವನ ಶೈಲಿ ಮತ್ತು ದಿನಂಪ್ರತಿ ನಮ್ಮ ಜೊತೆಗಿರುವ ಅನೇಕ ಚಿಕ್ಕಪುಟ್ಟ ವಿಷಯಗಳನ್ನು ಆಧರಿಸಿ ರಚಿಸಿರುವ ಕವನಗಳು ಎಲ್ಲರ ಮನ ರಂಜಿಸುವುದು ಎಂದು ನಂಬಿದ್ದೇವೆ.
ಕವಿಗಳು: "ಅವಳ" ಅಥವಾ ಕೀಲು ಕವನಗಳೆಲ್ಲವೂ ಚೇತನಾ ತೀರ್ಥಹಳ್ಳಿಯವರದು, ಇವರು ಹೊಸಅಲೆಯ ಮುಖ್ಯ ಬರಹಗಾರರಲ್ಲಿ ಒಬ್ಬರು ಮತ್ತು ಪತ್ರಕರ್ತೆ. "ಅವನ" ಅಥವಾ ತಿರುವು ಕವನಗಳು ಪಿ. ಡಿ. ಸತೀಶ್ ಚಂದ್ರರವರದು, ಇವರು ಕಲಾಸೌಧ ಮತ್ತು ಯುವ ಪ್ರತಿಭೆಗಳನ್ನೊಳಗೊಂಡ ಪ್ರಕಸಂ ತಂಡದ ನಿರ್ದೇಶಕರು.
ನಿರ್ದೇಶಕರು ಮತ್ತು ಸಹಕವಿ ಪಿ.ಡಿ. ಸತೀಶ್ ನಾಟಕದಬಗ್ಗೆ ಹೀಗೆನ್ನುತ್ತಾರೆ "ಚೇತನಾರವರ ಸೀರಿಯಸ್ ಕವನಗಳು ನನ್ನನ್ನು ಕಾಡುತ್ತಿತ್ತು, ಅದರ ಗುಂಗಿನಿಂದ ಹೊರಬರಲು, ನಾನು ಅವರಿಗೆ ಕಾಡಿದ ಕವನಕ್ಕೆ ತಿಳಿ ಹಾಸ್ಯದ ಉತ್ತರ ನೀಡಿದ್ದೆ. ಅವರ ಕವನಗಳ ನಮ್ರತೆ ಮತ್ತು ನಾವು ನಾಟಕಕ್ಕಾಗಿ ಸೇರಿಸಿರುವ ಕವನಗಳ ಸರಳತೆ ಈ ನಾಟಕದ ಅನನ್ಯತೆ. ಕಡಿಮೆ ವೆಚ್ಚ ಹಾಗೂ ರಂಗದ ಮೇಲೆ ಬೇಕಾಗುವ ಅತಿ ಕಡಿಮೆ ಸಜ್ಜಿಕೆ ಈ ನಾಟಕವನ್ನು ಸುಲಲಿತವಾಗಿಸಿದೆ. ಈ ನಾಟಕದ ಉದ್ದೇಶ ಕೂಡ ತಿಳಿದಿರುವ ವಿಷಯವನ್ನು ಅವಿಧಿತ, ಹೊಸತನ ತುಂಬಿದ ಮತ್ತು ಹಿಂದೆ ಕಾಣದ ಪರಿಯಲ್ಲಿ ಪ್ರೇಕ್ಷಕರಿಗೆ ಮುಟ್ಟಿಸುವುದೇ ಆಗಿದೆ. ಇದು ಓದು ಕಥೆ ಅಥವ ರಿಹರ್ಸ್ಡ್ ರೀಡಿಂಗ್ಗೆ ಸನಿಹವಾದ ರಂಗರೂಪ ಕೂಡ".
ನಾಟಕದ ಮೂಲ ಕವಿಯತ್ರಿ ಚೇತನಾ ತೀರ್ಥಹಳ್ಳಿರವರು ಹೀಗೆನ್ನುತ್ತಾರೆ: "ಕೆಲವೊಮ್ಮೆ ಪುಟಗಟ್ಟಲೆ ಕಥೆಯೂ ಹೇಳಲಾಗದನ್ನು ಕೆಲವೇ ಸಾಲುಗಳುಳ್ಳ ಕವನ ಹೇಳುವುದು. ನಾಟಕದ ಬೆಳಕು, ಸಂಗೀತ ಹಾಗು ರಂಗದ ಮೆರಗು ಇದರೊಂದಿಗೆ ಬೆರೆತಾಗ ಪ್ರೇಕ್ಷಕರನ್ನು ಮನೋರಂಜಿಸುವುದೆಂದು ನನ್ನ ಅನಿಸಿಕೆ. ಸತೀಶ್ ಬರೆದ ಕವನ ಓದಿದಾಗ ನಾನು ಬರೆದ ಕವನಕ್ಕೆ ಈ ತರಹದ ಮತ್ತೊಂದು ಆಯಾಮಉಂಟೆ ಎಂದು ಆಶ್ಚರ್ಯವಾಯ್ತು. ಜೀವನದ ಹಂಗನ್ನು ವರ್ಣಿಸುವ ನನ್ನ ಕವನಗಳಿಗೆ ವಾಸ್ತವತೆಯನ್ನು ಪ್ರತಿಬಿಂಬಿಸುವ ಸತೀಶರ ಕವನಗಳು ಎಲ್ಲರನ್ನೂ ತಲುಪಲಿ ಎನ್ನುವುದು ನನ್ನ ಬಯಕೆ."
![]() |
The Ensemble |
ಪ್ರಕಸಂ ಬಗ್ಗೆ: ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋ?ಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಸ್ವಯಂ ಸೇವಾ ಸಂಘಟನೆ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರಿಕರರಿಗೆ ಪ್ರಸ್ತುತ ಪಡಿಸಿದೆ.
ದಿನಾಂಕ ಮತ್ತು ಸಮಯ: ಭಾನುವಾರ, ಅಕ್ಟೋಬರ್ ೨೦, ಸಂಜೆ ೪ ಗಂಟೆಗೆ
ಸ್ಥಳ: ಕೆ.ಎಚ್. ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ, ಬಸವನಗುಡಿ, ಬೆಂಗಳೂರು - ೧೯; ವಿವರಗಳಿಗೆ: ೭೨೫೯೯೯೮೨೨೨/೩೩೩
Comments
Post a Comment