Skip to main content

ಜೋಗೋರ ಅಂಜಪ್ಪನ ಕೋಳೀಕತೆ - ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್

 ಈ ಕಥೆಯು, ಪ್ರಕಸಂ ಅಭಿನಯಿಸಿದ ಕಥಾಸಂಗಮ ನಾಟಕಕ್ಕಾಗಿ ಆಯ್ದುಕೊಂಡಿದ್ದು. ನಾಟಕದ ಪೂರ್ಣ ವಿವರಕ್ಕಾಗಿ - www.prakasamtrust.org/ks ನೋಡಿ.

ಜೋಗೋರ ಅಂಜಪ್ಪನ ಕೋಳೀಕತೆ 

*ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ 

ನಮ್ಮಊರಿನ ಹಳೇ ಮುದುಕರಲ್ಲಿ ಬಹಳ ಹಳಬ ಜೋಗೋರ ಅಂಜಪ್ಪ, ಯಾವುದಾದರೂ ಮಾತಿಗೆ ಬಂದರೆ ಅಂಜಪ್ಪ, ತಾನು ಹೈದನಾಗಿದ್ದಾಗ ಅದು ಇದು ಆಯಿತು, ಎಂದು ಹೇಳುತ್ತಾನೆ. ಅಂಥ ಸಮಾಚಾರವನ್ನು ನೋಡಿದವರು ಇನ್ನು ಯಾರೂ ಈಗ ಜೀವಂತವಾಗಿಲ್ಲ, ಶಿಪಾಯಿದಂಗೆ ಆದ ಕಾಲಕ್ಕೆ ಅಂಜಪ್ಪ ಹುಡುಗನಂತೆ. ಈಗವನ ವಯಸ್ಸು ಕೇಳಿದರೆ ಅವನು ನೂರು ವರುಷ ಇರಬೇಕು ಎನ್ನುತ್ತಾನೆ. ಈಗ ಹತ್ತು ವರುಷದಿಂದ ಅವನಿಗೆ ನೂರು ವರುಷ ವಯಸ್ಸು, ಮುಖ್ಯವಾಗಿ ಈ ಕಾರಣದಿಂದ ಅಂಜಪ್ಪ ಎಲ್ಲಾ ಸಂದರ್ಭದಲ್ಲಿಯೂ ಎಂಥವರಿಗಾದರೂ ಬುದ್ದಿಹೇಳುವ ಅಧಿಕಾರವನ್ನು ಪಡೆದಿದ್ದಾನೆ. ಈ ವಿಚಾರದಲ್ಲಿ ಇತರರಿಗೆ ಏನಾದರೂ ಸಂದೇಹವಿದ್ದರೂ ಅಂಜಪ್ಪನಿಗೆ ಲೇಶವಾದರೂ ಇಲ್ಲ. ಹೀಗೆ ಮಾಡು, ಹಾಗೆ ಮಾಡು, ಎಂದು ಅಂಜಪ್ಪ ಹೇಳಿದಾಗ ಯಾರಾದರೂ ಒಡನೆಯೇ ಒಪ್ಪದೇ ಇದ್ದರೆ ಅವನು “ಏನಯ್ಯ ಇದು? ನಿಮ್ಮಪ್ಪ ಮಗುವಾಗಿದ್ದಾರೆ ನನ್ನ ಗಡ್ಡ ನರೆತಿತ್ತು. ನನ್ಮಾತು ನಿನಗೆ ಹಗುರಾಯಿತೆ” ಎಂದು ಕೇಳುವನು. ಪ್ರಾಯಶಃ ವಿಸ್ತಾರವಾದ ಅವನ ಅನುಭವದ ಫಲವಾಗಿ ಅವನು ಕೊಡುವ ಬುದ್ಧಿವಾದ ಒಳ್ಳೆಯದಾಗಿಯೇ ಇರುತ್ತದೆ. ವಯಸ್ಸಿನಲ್ಲಿ ಜಾಂಬವಂತನಾಗಿದ್ದ ಹಾಗೆ ಅಂಜಪ್ಪ ಬುದ್ಧಿಯಲ್ಲಿ ಹನುಮಂತ. 

ಮೂರು ದಿವಸದ ಹಿಂದೆ ಅಂಜಪ್ಪ ರಂಗಪ್ಪನ ಮನೆಗೆ ಬಂದಿದ್ದ. ರಂಗಪ್ಪನಿಗೆ ನಮ್ಮ ತಾಲೂಕಿನಲ್ಲಿ ಬೆಂಚು ಮ್ಯಾಜಿಸ್ಟ್ರೇಟು ಕೆಲಸಕ್ಕೆ ನಿಯಮಿಸಿ ಈಗ ಕೆಲವು ದಿನಗಳ ಹಿಂದೆ ಆರ್ಡರು ಬಂದಿತು. ನಮ್ಮ ಊರಿನ ಜನಕ್ಕೆಲ್ಲಾ ಇದು ಬಹಳ ಸಂತೋಷ: ನಮ್ಮ ಶಾನುಭೋಗರು ಸಜಾಕೊಡುವ ಅಧಿಕಾರಾನ ಪಡೆದಿದ್ದಾರೆ ಎಂತ. ಹಳ್ಳಿಯ ಜನರಿಗೆ ಈ ಸಜಾಕೊಡುವುದು ಎನ್ನುವುದು ಬಹು ದರ್ಪದ ಶಕ್ತಿ ಎಂದು ಭಾವನೆ. ಏನಿಲ್ಲ ಎಂದರೂ ಈ ಅಧಿಕಾರ ಬಂದವನು ಒಬ್ಬ ಸುಬೇದಾರರಿಗೆ ಸಮನಾದ ಹಾಗೆ ಲೆಕ್ಕ. ಪೂರ್ವದಲ್ಲಿ ಸುಬೇದಾರಿಗೆ ಮತ್ತು ಅವರಿಗೆ ಮೇಲ್ಪಟ್ಟವರಿಗೆ ಮಾತ್ರ ಈ ಅಧಿಕಾರವಿರುತ್ತಿತ್ತು. ಈಗ ಸರ್ಕಾರದವರು ಅದನ್ನು ಸುಬೇದಾರರಿಂದಲೂ ಕಿತ್ತು ಕೊಂಡಿದ್ದಾರೆ ಎಂದು ಜನರ ಎಣಿಕೆ. ಆದ್ದರಿಂದ ಹಾಗೇನೆ ನೋಡಿದರೆ ಈ ಅಧಿಕಾರ ಬಂದ ಮನುಷ್ಯ ಸುಬೇದಾರರಿಗಿಂತ ಒಂದು ಗುಲುಗಂಜಿಯಷ್ಟು ಮೇಲಿನ ಹುದ್ದೆ ಪಡೆದ ಹಾಗೆಯೇ, ಗ್ರಾಮದ ಮುಖ್ಯ ವೃದ್ದನಾದ ಅಂಜಪ್ಪ ತನ್ನೂರ ಶಾನುಭೋಗರಿಗೆ ಬಂದ ಈ ಮರ್ಯಾದೆಯ ಸಮಾಚಾರವನ್ನು ಕೇಳಿ ಅವರನ್ನು ಮಾತನಾಡಿಸುವುದಕ್ಕೆ ಮತ್ತು ಸ್ವಲ್ಪ ಬುದ್ದಿ ಹೇಳುವುದಕ್ಕೆ ಎಂದು ಬಂದ. 

ಅಂಜಪ್ಪ ಬಂದದ್ದನ್ನು ನೋಡಿ ರಂಗಪ್ಪ “ಬಾ, ಅಂಜಪ್ಪ ಕುಳಿತುಕೊ” ಎಂದ. ಅಂಜಪ್ಪ: ಏನಪ್ಪ ನಿನ್ನೆ ಮೇಸ್ಟ್ರೀಟು ಕೆಲಸ ಬಂತಂತಲ್ಲ. ಬಾಳಾ ಸಂತೋಸ. 

ರಂಗಪ್ಪ: ಸಂತೋಸ ಏನೋ ಸರಿ, ಅಂದಪ್ಪ. ಆದರೇನು ? ಬಿಟ್ಟಿ ದುಡಿಯೋದು. ದುಡ್ಡಿಲ್ಲ ಕಾಸಿಲ್ಲ. ಅಂಜಪ್ಪ: ದುಡ್ಡಿಲ್ಲೆ? ಯಾಕ ದುಡ್ಡಿಲ್ಲ? 

ರಂಗಪ್ಪ: ಇದು ಬೆಂಚು ಮೇಸ್ಟ್ರೀಟು ಎಂತ ಮರ್ಯಾದೆಗೆ ಕೆಲ್ಲಾ ಮಾಡೋದು. ಇದಕ್ಕೆ ಸರ್ಕಾರದವರು ಸಂಬಳ ಕೊಡೋದಿಲ್ಲ. 

ಅಂಜಪ್ಪ: ಸಂಖ್ಯಾ ಇಲ್ಲದಿರ ಇದ್ದರೂ ದುಡ್ಡು ಯಾಕಿಲ್ಲ? ಸಂಖ್ಯಾ ತಕ್ಕೊಳ್ಳೋರು ಸಂಖ್ಯಾನ ಮೇಲ್ಕರ್ಚಿನ ದುಡ್ಡು ಅಂತ ಮಾಡ್ತಿರಲಿಲ್ಲವಾ ? ಸಂಖ್ಯಾ ಒಂದಾದರೆ ಸಂಪಾದನೆ ಹತ್ತು. 

ರಂಗಪ್ಪ: ಅದೆಲ್ಲಾ ಪೂರ್ವಕಾಲದ ಮಾತು. ಈಗ ಲಂಚಾ ಗಿಂಚಾ ನಡೆಯೋದಿಲ್ಲ. 

ಅಂಜಪ್ಪ: ನಡೆಯೋರಿಗೆ ನಡೀತದೆ. ಇಲ್ಲದೇ ಇದ್ದೋರಿಗೆ ಇಲ್ಲಾ ತಾನೆ. ಹೋಗ್ಲಿ, ಈಗ ನೀನು ಕೋಪ 

ಬಂದ್ರೆ ಸುಬೇದಾರ್ ನಿಲ್ಲಿಸಿ ಜುಲ್ಮಾನೆ ಹಾಕಬಹುದೋ ಇಲ್ಲೋ ? 

ರಂಗಪ್ಪ: ನೀನು ಮೇಟಾಗಿದ್ದರೆ ಹಾಗೆ ಮಾಡಬಹುದಾಗಿತ್ತು. ನಾನು ಶಾನುಭೋಗ ಸುಬೇದಾರಿಗೆ ಜುಲ್ಮಾನೆ ಹಾಕಿದರೆ ಖಾತೇ ಬರಲಿಲ್ಲ ಅಂತ ಅವರು ನನ್ನ ಕೆಲಸದಿಂದ ತೆಗೀತಾರೆ. 

ಅಂಜಪ್ಪನಿಗೆ ಇದು ನ್ಯಾಯ ಎಂದು ತೋರಿತು. ಓ ಹೌದು ಎನ್ನುತ್ತಾ ಅವನು ಸಂಚಿಯನ್ನು ತೆಗೆದು ಅಡಕೆ ಎಲೆಯನ್ನು ಆರಿಸುವುದರಲ್ಲಿ ತೊಡಗಿದನು. ಅಂಜಪ್ಪನ ಸಂಚಿಯಲ್ಲಿ ಎಲೆಯೂ ಅಡಕೆಯೂ ಮೂರು ಪಾಲು ಅವನ ಹಾಗೆಯೇ ವಯಸ್ಸಾದುವು. ಅವನು ಆಗಾಗ ಎಲೆ ತೆಗೆದುಕೊಳ್ಳುವುದಾದರೂ ಅಯ್ಯೋ ಇದು ಹೋಗುತ್ತದಲ್ಲಾ ಎಂದು ಬಹಳ ಬಾಡಿರುವ ಎಲೆಯನ್ನೇ ಹಾಕಿಕೊಳ್ಳುವನು. ಅದನ್ನು ಎಸೆಯುವುದಕ್ಕೆ ಇಷ್ಟವಿಲ್ಲ. ಬಾಡಿರುವ ಎಲೆ ಮುಗಿಯುವ ವೇಳೆಗೆ ಹೊಸದಾಗಿ ತೆಗೆದುಕೊಂಡ ಎಲೆಯೂ ಬಾಡುತ್ತ ಬಂದಿರುವುದು. ಅಂತು ಸಂಚಿಯಲ್ಲಿ ನಾಲ್ಕು ಹಸುರು ಎಲೆ ಇದ್ದರೂ ಅವನು ಹಾಕಿಕೊಳ್ಳುವುದು ಬಾಡಿದ ಎಲೆಯನ್ನೇ. ಅವನ ಸಂಚಿಯ ಅಡಕೆಯೂ ಪ್ರಸಿದ್ಧ, ಅಡಕೆ ಎನ್ನುವುದು ಎಲೆಯೊಡನೆ ಅಗಿದು ನುಂಗುವ ಪದಾರ್ಥ ಎಂದು ತಿಳಿವಳಿಕೆಯಿಲ್ಲದವರ ಭಾವನೆ. ಅಡಕೆಯ ಉದ್ದೇಶ ಮುಖ್ಯವಾಗಿ ಬಾಯಲ್ಲಿ ನೀರೂರಿಸುವುದು ಮಾತ್ರ, ತಾನು ನೀರಾಗುವುದಲ್ಲ. ಬಹಳ ಹೊತ್ತು ಬಾಯಲ್ಲಿಟ್ಟುಕೊಂಡು ನೀರೂರಿ ನೆನೆದಮೇಲೆ ಅದು ಎಲೆಯೊಂದಿಗೆ ಚೂರ್ಣವಾಗಬೇಕು. ಬಾಯಿಗೆ ಹಾಕಿಕೊಂಡು ಸ್ವಲ್ಪಹೊತ್ತಿಗೆ ಮೆದುವಾಗಿಬಿಟ್ಟರೆ ಅರವತ್ತು ಗಳಿಗೆಯೂ ಎಲೆ ಅಡಕೆ ಹಾಕೋದಕ್ಕೆ ಎಷ್ಟು ಅಡಕೆ ಆದರೆ ಸಾಕಾದೀತು ? ಅಂಜಪ್ಪ ಬಾಡಿದ ಒಂದು ಎಲೆಯನ್ನೂ ಸಣ್ಣ ಒಂದು ಅಡಕೆಯನ್ನೂ ಬಾಯಿಗೆ ಹಾಕಿಕೊಂಡು ಸುಣ್ಣದ ಕಾಯಿಂದ ಸ್ವಲ್ಪ ಸುಣ್ಣವನ್ನು ತೆಗೆದುಕೊಂಡು “ಅದಿರಲಿ, ನಾನು ನಿನಗೆ ಒಂದು ಮಾತು ಹೇಳಬೇಕು ಅಂತ ಬಂದೆ” ಎಂದ. ರಂಗಪ್ಪ: ಏನು ಮಾತು ಅಂಜಪ್ಪ? ಹೇಳು, ನೀನು ಅನುಭವಸ್ಥ. ನಮ್ಮಂತವರಿಗೆ ತಿಳಿಯಬೇಕಾದದ್ದು ನಿನಗೆ ನೂರು ಮಾತು ಗೊತ್ತಿದೆ. 

ಅಂಜಪ್ಪ: ಅದಕಾಗಿಯೇ ನಾ ಬಂದದ್ದು. ನೀನು ಮೇಸ್ಟೀಟಾಗಿದ್ದೀಯಲ್ಲಾ, ಜನರು ಎದುರಿಗೆ ಬಂದಾಗ ಇವರು ಸತ್ಯವಂತ್ರು, ಇವರು ಕಳ್ಳು, ಅಂತ ಸರಿಯಾಗಿ ತಿಳಿದು ಶೀಕ್ಷೆ ಕೊಡಬೇಕು. ಈ ಪೋಲೀಸೋರೂ ಲಾಯರೀಗಳೂ ಹೇಳೋ ಮಾತು ಕೇಳಿಬಿಟ್ಟು ಶೀಕ್ಷೆ ಕೊಡಬಾರದು. ಅದನ್ನು ನಿನಗೆ ಹೇಳೋಕೆ ಬಂದ. 

ರಂಗಪ್ಪ: ಅದೇನೋ ಸರಿ. ಆದರೆ ಸತ್ಯವಂತ್ರು ಕಳ್ಳು ಅನ್ನೋದು ಅವರ ಮಾತು, ಇವರ ಮಾತಿನಿಂದ ತಿಳಿಯಬೇಕು. ಮೇಲ್ನೋಟು ಇನ್ನೇನು ಮಾಡೋಕೆ ಆಗ್ತದೆ. 

ಅಂಜಪ್ಪ: ಮೇಸ್ಟ್ರೀಟು ಅಂದಮೇಲೆ ನಿಜ ಹೇಗಿರಬಹುದು ಎಂತ ಯೋಚನೆ ಮಾಡಬೇಕು. ಎದುರಿಗೆ ಬಂದಿರೋ ಮನುಷ್ಯನನ್ನು ಏನು ಅಂತ ಕೇಳಬೇಕು. 

ರಂಗಪ್ಪ: ಅಂಜಪ್ಪಾ ನೀನು ಕೋಪಿಸಿಕೋಬೇಡ. ನಿನ್ನ ಒಂದು ಮಾತು ಕೇಳೇನೆ. 

ಅಂಜಪ್ಪ: ಏನು ಕೇಳಪ್ಪು, ಕೋಪ ಯಾಕೆ ? 

ರಂಗಪ್ಪ: ನಿಮ್ಮೇಲೆ ಯಾವಾಗಲಾದರೂ ಮೇಸ್ಟ್ರೀಟು ಫಿರಾದಾಗಿತ್ತೆ? 

ಅಂಜಪ್ಪ: ಸೈ, ನನ್ನ ವಂತಕಾರಿ, ಅದೇ ಅಣ್ಣ ನಾನು ಹೇಳೋಕೆ ಬಂದಿದ್ದು ನಿನ್ನೆ. ಒಂದು ಕೋಳಿ ಕದ್ದೆ ಅಂತ ಫಿರ್ಯಾದು ಮಾಡಿದರು. ಕದೀಲಿಲ್ಲ ಅಂತ ನಾನು. ಕದ್ದ ಅಂತ ಅವರು. ಇಪ್ಪತ್ತು ರೂಪಾಯಿ ಜುಲ್ಮಾನೆ ಕೊಟ್ಟರೆ 

ಹಾಗೇ ಬಿಡುತ್ತೀವಣ್ಣ. ಆಗದಿದ್ದರೆ ಜೈಲು ಅಂದರು. ಜುಲ್ಮಾನೆ ಕೊಟ್ಟು ಮಾನವಾಗಿ ಬಂದಿ. 

ಹೇಳಿದ. 

ರಂಗಪ್ಪ: ನೀನು ಕೋಳಿ ಕದ್ದೆ ಅಂತ ಅವರು ಹ್ಯಾಗೆ ಹೇಳಿದರು ? ಕೋಳಿ ನಿನ್ನ ಹತ್ತಿರ ಇನ್ನೇನು ? ಅಂಜಪ್ಪ: ಇತ್ತು ನನ್ನಪ್ಪು, ಹಾಳುಮುಂಡೇ ಕೋಳಿ ನನ್ನ ತಾವ ಇರೋವತ್ತಿಗೆ ಅಲ್ಲವಾ ನಾನು ಸಿಕ್ಕೊಂಡದ್ದು. ರಂಗಪ್ಪ: ಇನ್ನು ನೀನು ಕದ್ದ ಹಂಗಾಯಿತಲ್ಲ, 

ಅಂಜಪ್ಪ: ಅದ್ರೆ ಅಪ್ಪು ನಾನು ಹೇಳೋದೂ, ಕೋಳಿ ನನ್ನ ತಾವಿತ್ತು. ಆದ್ರೆ ನಾನು ಅದನ ಕದೀಲಿಲ್ಲ. ರಂಗಪ್ಪ: ಹಾಗಾದಮೇಲೆ ಏನು ಸಮಾಚಾರ ಸರಿಯಾಗಿ ಹೇಳಿ ಬಿಡು ಕೇಳೋಣಂತೆ” ಎಂದ. ಅಂಜಪ್ಪ 

ಇದು ನಡೆದದ್ದು ಸುಮಾರು ನಲವತ್ತು ವರುಷದ ಹಿಂದೆ ಇರಬಹುದು. ಆಗ್ಗೆ ಅಂಜಪ್ಪನಿಗೆ ಮಧ್ಯದ ವಯಸ್ಸು, ಆಗಿನ ದಿವಸಕ್ಕೆ ಅವನು ತನ್ನ ಕಸಬಿಗಾಗಿ ಊರು ಊರು ಸುತ್ತುತ್ತಾ ಇದ್ದ. ಜೋಗಿಯವರ ಕಸಬು ಅಂದರೆ ಸೊಗಸಾಗಿ ವೇಷ ಹಾಕಿಕೊಂಡು ಎಡಹೆಗಲಿಗೆ ಜೋಳಿಗೆ ಬಲಹೆಗಲಿಗೆ ಕಿಂದರಿ ತೂಗುಹಾಕಿಕೊಂಡು ತಾತನ ಕಾಲದಿಂದ ಬಂದ ಪದಗಳನ್ನು ಹಾಡುತ್ತಾ ಊರೆಲ್ಲ ಭಿಕ್ಷ ಎತ್ತುವುದು. ಅಂಜಪ್ಪನ ತಾತ ಮುತ್ತಾತನ ಕಾಲಕ್ಕೆ ಜೋಗಿಗಳು ಭಿಕ್ಷೆ ಎತ್ತುವುದು ಹೊರತು ನೆಲ ಉತ್ತದ್ದಿಲ್ಲ. ಈಚೆಗೆ ಕಾಲ ಕೆಟ್ಟು ಹೋಗಿ ಜೋಗಿಗಳೂನೂ ಸಾಗುವಳಿ ಕೆಲಸ ಮಾಡುತ್ತಾ ಇದಾರೆ. ಅಂಜಪ್ಪ ಇದನ್ನು “ಬ್ಯಾಮಣರು ಪ್ಯಾಟೆಗಳಾಗೆ ಜೋಡಿನ ಅಂಗಡಿ ಇಟ್ಟಿರೋಹಂಗೆ' ಅಂತ ವರ್ಣಿಸುತ್ತಾನೆ. ಭಿಕ್ಷೆ ಬೇಡಬೇಕು ಅಂದರೆ ನೀಚವೃತ್ತಿ ಎಂದು ನಾವು ತಿಳಿಯಬಹುದು. ಅಂಜಪ್ಪ ಈ ಮಾತನ್ನು ಒಪ್ಪುವವನಲ್ಲ. “ಜೋಗಿ ಅಂದ್ರೆ ಏನು ಸುಮ್ಮನೆ ಆಯಿತ? ಇಪ್ಪತ್ತು ವರ್ಷ ಅಪ್ಪ 

ಬೇಡಾ ? ಉಂ ಜೊತೆಗೋ ಮಾವನ ಜೊತೆಗೋ ಕಿಂದ್ರಿ ಹೊತ್ತು ಕೊಂಡು ತಿರುಗಿ, ಹಾಡೋ ಪದಾನ ಜೊತೆಗೆ ಹಾಡ್ತಾ, ಕಸಬು ಕಲಿಯೋದು ಅಂದ್ರೆ ಬಿಟ್ಟಿಯಾಯ್ತನಪ್ಪ? ಯಾವ ಹೈದಾ ಬೇಕಾದ್ರೂ ನೇಗಿಲ ಹಿಂದೆ ನಿಂತುಕೊಂಡು 

ಬುದ್ದಿ ಎತ್ತಿನ ಬಾಲಾ ತಿರುವಿ ಚೊ ಚೋ ಎನ್ನಬಹುದು. ಪದಾ ಕಲಿಯೋದ್ರೆ ನಾಳೆ ಬೇಡಾ ? ಅಂದ್ರೆ ಬಂದು ಬಿಡ್ತದೆಯಾ ? ಲಕ್ಷ್ಮೀ ಅಂತಾ ಅನ್ನೋದಕ್ಕೆ ಎಲ್ಲಾರಿಗೂ ಬರ್ತಾದೆಯಾ ? ಅನ್ನು ಅಂತ ಕೇಳು ಕೀ ಕೀ ಅಂತ ಸೀನುತ್ತಾರೆ. ಬ್ರೌಪದದೇವಿ ಅನ್ನೋಕೆ ಬಾಯಿ ತಿರುಗೋದು ಸುಲಬಾಯ್ತಾ? ನಾನು ಕಸಬು ಕಛೇ ಅನ್ವೇಕಾದ್ರೆ ನನಗೆ ಇಪ್ಪತ್ತೈದು ವರ್ಸ ಆಗಿತ್ತು. ಆಮೇಲೆ ನಮ್ಮಪ್ಪ ಈಗ ಪರವಾ ಇಲ್ಲ, ನೀನೊಬ್ಬನೇ ಹೋಗಬಹುದು' ಅಂತ ಬಿಟ್ಟ” ಎನ್ನುವನು. ಎಂದರೆ ಜೋಗಿಯಾಗಬೇಕಾದರೆ ಈಗ ನಾವು ಬಿ.ಎ. ಡಿಗ್ರಿ ಪಡೆಯಬೇಕಾದರೆ ಹೇಗೋ ಹಾಗೆ ಕಷ್ಟ. ಅಂಜಪ್ಪ ನಮ್ಮ ಸುತ್ತಿನ ಅರವತ್ತು ಎಪ್ಪತ್ತು ಗ್ರಾಮಗಳಲ್ಲಿ ಓಡಿಯಾಡುತ್ತಿದ್ದನೆಂದು ನನಗೆ ತೋರುತ್ತದೆ. ಜೋಗಿಯಾದವನು ಮನೆ ಬಿಟ್ಟು ಹೊರಡಬೇಕಾದರೆ ಎಲ್ಲಾ ಭಿಕ್ಷುಕರ ಹಾಗೆ ಹೊರಡುವುದಕ್ಕಿಲ್ಲ. ನಾಟಕದಲ್ಲಿ ರಾಜನ ಪಾತ್ರವನ್ನು ವಹಿಸುವವನು ಹೇಗೆ ಮುಖಕ್ಕೆ ಹುಬ್ಬಿಗೆ ಕೆನ್ನೆ ಮೀಸೆ ತುಟಿಗೆ ಬಣ್ಣಗಳನ್ನು ಹಾಕಿಕೊಳ್ಳುವನೋ ಹಾಗೆ ಹಾಡುವುದಕ್ಕೆ ಹೋಗುವ ಜೋಗಿ ಸಂಪ್ರದಾಯದ ಪ್ರಕಾರ ಅಲಂಕಾರ ಮಾಡಿಕೊಳ್ಳಬೇಕು. ಜೋಗಿ ಶೈವನೂ ಅಲ್ಲ ವೈಷ್ಣವನೂ ಅಲ್ಲ; ಕ್ಷುದ್ರ ದೇವತೆಗಳನ್ನು ಪೂಜಿಸುವವನೂ ಅಲ್ಲ: ಇದಿಷ್ಟರಲ್ಲಿ ಯಾವುದನ್ನೂ ಬಿಟ್ಟವನೂ ಅಲ್ಲ. ಆದದ್ದರಿಂದ ಅವನ ಮುಖದ ಮೇಲೆ ವಿಭೂತಿ ಕುಂಕುಮ ಅರಿಶಿನ ಈ ಮೂರೂ ಬೆರೆತಿರುವವು. ಜೊತೆಗೆ ಕಾಡಿಗೆ, ಜೋಗಿಯ ಕಣ್ಣು ಬಹು ಕ್ರೂರವಾದದ್ದು. ಅದರಿಂದ ಜನಕ್ಕೆ ಕೇಡಾಗದೆ ಇರುವುದಕ್ಕೆ ಅವನು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೇ ತಿರುಗುವನು. ಅದರಲ್ಲಿಯೂ ಆ ಪದಗಳನ್ನು ಹೇಳುವ ಹೊತ್ತಿನಲ್ಲಿ ಭೀಮ ಹನುಮಂತರ ಪಾತ್ರಗಳ ಮಾತನ್ನು ಹೇಳುವಾಗ ಕಣ್ಣಿಗೆ ಕಾಡಿಗೆ ಇರದೇ ಇದ್ದರೆ ಆ ತೀಕ್ಷ್ಮವಾದ ದೃಷ್ಟಿ ಏನಾದರೂ ಜನಕ್ಕೆ ಸೋಕಿದರೆ ಅವರು ಅಲ್ಲಿಯೇ ಮೂರ್ಛ ಹೋದಾರು. ಮುಖಕ್ಕೆ ಒಂದು ಅಲಂಕಾರವಿರುವ ಹಾಗೆ ಆ ಬಟ್ಟೆಯೂ ಒಂದು ರೀತಿಯದಾಗಿರಬೇಕು. ರುಮಾಲು ಮೂರು ಬಣ್ಣಕ್ಕೆ ಕಡಿಮೆ ಇಲ್ಲದೆ ಬಣ್ಣಗಳ ಚಿಂದಿಗಳಿಂದ ಮಾಡಿದ್ದಾಗಿರಬೇಕು. ಅಂಜಪ್ಪ ಪ್ರಾಯದಲ್ಲಿ ನೋಡುವುದಕ್ಕೆ ಚೆನ್ನಾಗಿದ್ದ. ಈ ವೇಷವನ್ನು ಹಾಕಿಕೊಂಡು ಅವನು ಪದ ಹೇಳುತ್ತಾ ಬಂದರೆ ಊರಿನ ಹೆಂಗಸರು ಮಕ್ಕಳು ಅವನನ್ನು ಸುಮ್ಮನೆ ಸುತ್ತಿಕೊಳ್ಳುವರು. ದೊಡ್ಡ ಗೌಡರ ಮನೇ ಮುಂದೆಯೆಲ್ಲಾ ಹೆಂಗಸರು ಅವನನ್ನು ಕೂರಿಸಿ ಪದವನ್ನು ಹೇಳಿಸಿ ಕಳುಹಿಸುವರು. “ನಾನು ಬಹಳಾ ಪದಾ ಹೇಳಿದ್ದಿ ಬಹಳಾ ಜನಕ್ಕೆ ಸಂತೋಸ ಪಡಿಸಿಟ್ಟಿ” ಎಂತ ಅಂಜಪ್ಪ ಆಗಾಗ ಹೇಳುತ್ತಾನೆ. ಈ ನಲವತ್ತು ವರ್ಷದ ಹಿಂದೆ ಅಂತ ಅನ್ನೋ ಕಾಲದಲ್ಲಿ ಇವನ ಜೋಗಿ ಕಸಬು ಬಹಳ ಉಚ್ಛಾಯ ಸ್ಥಿತಿಯಲ್ಲಿದ್ದಿತು. ಇವನು ಬಹಳ ಜನಕ್ಕೆ ಬೇಕಾಗಿದ್ದನು. 

ಇವನು ಹೋಗುತ್ತಿದ್ದ ಊರುಗಳಲ್ಲಿ ಕಾಳಾಪುರ ಒಂದು. ನಾನು ಊರಿನ ಹೆಸರನ್ನು ನಿಜವಾಗಿ ಹೇಳುತ್ತಿಲ್ಲ. ಕಾಳಾಪುರ ಎಂದು ಒಂದು ಊರು ಇದ್ದರೆ ನಾನು ಹೇಳುತ್ತಿರುವುದು ಆ ಊರನ್ನು ಅಲ್ಲವೆಂದು ತಿಳಿಯಬೇಕು. ನಾನು ಹೇಳುವುದು ಒಂದು ಊಹೆಯ ಹೆಸರು, ಕಾಳಾಪುರ ತಕ್ಕಮಟ್ಟಿಗೆ ದೊಡ್ಡ ಊರು. ಆದದ್ದರಿಂದ ಅಂಜಪ್ಪ ಅಲ್ಲಿ ಹೋದಾಗ ಎರಡು ದಿವಸ ಮೂರು ದಿವಸ ಇದ್ದು ಬಿಡುವುದೂ ಉಂಟು. ಅಂಜಪ್ಪ ನೋಡುವುದಕ್ಕೆ ಚೆನ್ನಾಗಿದ್ದನೆಂದು ಹೇಳಿದೆನಷ್ಟೆ. ಅದು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ಮಾತು. ಇದರ ಜೊತೆಗೆ ಇವನು ಅಲಂಕಾರ ಬೇರೆ ಮಾಡಿಕೊಂಡು ಹಳ್ಳಿಗೆ ಹೋದರೆ ಇವನ ರೂಪಕ್ಕೆ ಮೆಚ್ಚುವ ಹಳ್ಳಿಯ ಹೆಂಗಸರು ಇರುತ್ತಿದ್ದದ್ದು ನಾಟಕದಲ್ಲಿ ಸುಂದರನಾದ ನಟನನ್ನು ಮೆಚ್ಚುವ ಸ್ತ್ರೀಯರಿರುವಂತೆ ಸಹಜವಾದದ್ದೇ. ಸ್ವಲ್ಪ ವಯಸ್ಸಾದ ಹೆಂಗಸರಾದರೆ ಅವರ ಜೊತೆಗೆ ಕೂತು ಮಾತನಾಡುವುದಕ್ಕೆ ಅಂಜಪ್ಪ ಹಿಂತೆಗೆಯುತ್ತಿರಲಿಲ್ಲ. ಯಾಕೆಂದರೆ ಇವನ ಸಂಗಡ ಮಾತನಾಡಿದ್ದಕ್ಕಾಗಿ ಅವರನ್ನು ಗದರಿಸುವವರು ಇರುತ್ತಿರಲಿಲ್ಲ. ಸ್ವಲ್ಪ ಚಿಕ್ಕ ವಯಸ್ಸಿನವರಾದರೆ ಅಂಜಪ್ಪ ಹಿಂತೆಗೆಯುತ್ತಿದ್ದ. ಮನೆಯ ಗಂಡಸರು ನೋಡಿದರು; “ಏನಯ್ಯ ಜೋಗಿ, ಭಿಕ್ಷ ತೆಗೆದುಕೊಂಡು ಹೋಗುವುದು ಬಿಟ್ಟು ಮನೆ ಹೆಂಗಸರ ಕೂಡ ಸರಸವಾಡುತ್ತಾ ಇದ್ದೀಯಾ ? ನಡಿ ಆಚೆಗೆ” ಎನ್ನುವರು. ಹೊರಗಿನವರು ಕಂಡರು: “ಏನು ಜೋಗಪ್ಪಾ ಪರವಾಯಿಲ್ಲ” ಎಂದು ನಗುವರು. ಭಿಕ್ಷೆಯಿಂದ ಜೀವಿಸುವ ಮನುಷ್ಯನಿಗೆ ಈ ಎರಡು ಮಾತೂ ಕಷ್ಟವೇ. ಕಾಳಾಪುರದಲ್ಲಿ ಒಂದು ಸಲ ಇವನು ಹೋಗಿದ್ದಾಗ ಆ ಊರಿನ ಗೌಡನ ಹೆಂಡತಿ ಇವನನ್ನು ಕೂರಿಸಿಕೊಂಡು ಪದ ಕೇಳಿದಳಂತೆ. ಗೌಡನಿಗೆ ಅವಳು ಮೂರನೆಯ ಹೆಂಡತಿ, ಪದ ಹೇಳಿದ ಮೇಲೆ ಅವಳು ಇವನಿಗೆ ಸ್ವಲ್ಪ ಎಲೆ ಅಡಕೆ ಕೊಟ್ಟಳು. ಇವನು ಹಾಕಿಕೊಂಡು ಸ್ವಲ್ಪ ಹೊತ್ತು ಕುಳಿತ. ಮಧ್ಯೆ ಗೌಡ ಬಂದು ಇವನ ಮೇಲೆ ಬಹಳ ಕೋಪಿಸಿಕೊಂಡ. ಅಂಜಪ್ಪ ಸಾಮಾನ್ಯವಾಗಿ ಬದಲು ಹೇಳುವವನಲ್ಲ, ಗೌಡ ಸ್ವಲ್ಪ ಕೆಟ್ಟ ಮಾತು ಹೇಳಿದ್ದರಿಂದ ಇವನಿಗೂ ರೇಗಿತು. ನನ್ನ ಏನೋ ಮಾತನಾಡಿಬಿಟ್ಟಿರಿ, ಗೌಡರೇ, ನೀವು ನಿಮ್ಮ ಹೆಂಡಿರನ್ನು ಏನೆಂದು ತಿಳಿದುಕೊಂಡಿದ್ದೀರ ? ನೀವು ಮಾನವಂತರಾದರೆ ನಿಮ್ಮಹೆಂಡರಿಗೆ ಹೇಳಿರ, ನನ್ಯಾಕೆ ಬರ” ಎಂದ. ಗೌಡ “ಎಚ್ಚರಿಕೆಯಿಂದ ಇರು ಜೋಗೀ, ಯಾವಾಗಲಾದರೂ ಬಲಿಹಾಕಿಬಿಟ್ಟೇನು” ಎಂದ. ಅಂಜಪ್ಪ ತಾನು ಬದಲಿಗೆರಡು ಮಾತು ಹೇಳಿ ಜೋಳಿಗೆ ತೆಗೆದುಕೊಂಡು ಹೊರಟುಹೋದ, ಇದಾದ ಮೇಲೆ ಅಂಜಪ್ಪ ಕಾಳಾಪುರಕ್ಕೆ ಒಂದು ಸಲವೋ ಎರಡು ಸಲವೋ ಹೋಗಿದ್ದ. ಏನೂ ವಿಶೇಷ ನಡೆಯಲಿಲ್ಲ. ಮೂರನೆಯ ಸಲ ಹೋಗಿದ್ದಾಗ ಆ ಊರಿನ ಎಂಥದೋ ಕೇರಿಯಲ್ಲಿ ಒಂದು ಜಗುಲಿಯ ಮೇಲೆ ಕೂತು ಪದ ಹೇಳುತ್ತಿರಬೇಕಾದರೆ ಪಕ್ಕದ ಮನೆ ಹೆಣ್ಣು ಒಬ್ಬಳು ಪದವನ್ನು ಕೇಳುತ್ತಾ ಅವರ ಬಾಗಿಲಲ್ಲಿ ನಿಂತುಕೊಂಡಳು. ಪದವನ್ನು ಮುಗಿಸಿ ಜೋಗಿ ಹೊರಡುವುದರಲ್ಲಿ ಇದ್ದನು. ಆಗ ಅವಳು ಅವನನ್ನು ಕರೆದು ಅವನಿಗೆ ಸ್ವಲ್ಪ ಭಿಕ್ಷ ಹಾಕಿದಳು. ಮಾರನೆಯ ದಿವಸ ಅಂಜಪ್ಪ ಅಲ್ಲಿಗೆ ಹೇರಿ ಪದ ಹೇಳಿದ. ಆ ಹೆಣ್ಣು ಅವನನ್ನು ಕರೆದು ತನ್ನ ಮನೆಯ ಹತ್ತಿರ ಕೂರಿಸಿ ಪದ ಹೇಳಿಸಿ ಭಿಕ್ಷೆ ಹಾಕಿದಳು. ಅದು ಹಳ್ಳಿಗೆ ತಕ್ಕಮಟ್ಟಿಗೆ ದೊಡ್ಡ ಮನೆ. ಅಂದಪ್ಪ ಅದು ಯಾರ ಮನೆ ಎಂದು ವಿಚಾರಿಸಿದ. ಆ ಹುಡುಗಿ ಯಾರ ಮಗಳೆಂದು ವಿಚಾರಿಸಿದ. ಯಾರದೋ ಮನೆ. ಅದರ ಹೆಸರು ನನಗೆ ಈಗ ಜ್ಞಾಪಕವಿಲ್ಲ. ಅವರು ಪುಣ್ಯವಂತರು, ಆ ಹುಡುಗಿಯ ಗಂಡ ಪೋಲೀ ಬಿದ್ದಿದ್ದ. ಹುಡುಗಿ ಅಷ್ಟೇನೂ ಒಳ್ಳೆಯವಳಲ್ಲವಂತೆ. ಅದು ಅಂಜಪ್ಪನಿಗೆ ಆಗ ತಿಳಿಯದು. ಮನೆಯಲ್ಲಿ ಆ ಹುಡುಗಿ, ಅವಳ ಗಂಡ, ಅವಳ ಅತ್ತೆ, ಮೂರೇ ಜನ. ಅವರು ಕೋಳಿ ಸಾಕುತ್ತಾ ಇದ್ದರು. ಕೋಳೀ ವ್ಯಾಪಾರವನ್ನೂ ಮಾಡುತ್ತಾ ಇದ್ದರಂತೆ. ಅಂಜಪ್ಪ ಆಮೇಲೆ ಕಾಳಾಪುರಕ್ಕೆ ಹೋದಾಗ ಪುನಃ ಅವರ ಮನೆಗೆ ಹೋದ. ಹುಡುಗಿ ಬಹಳ ಚೆನ್ನಾಗಿರುವಳು. ಅಂಜಪ್ಪನಿಗೆ ಕೆಟ್ಟ ಉದ್ದೇಶವೇನೂ ಇಲ್ಲ. ಆದರೆ ಅವಳು ಬಹಳ ಮೆಚ್ಚುವುದರಿಂದ ಅವಳಿಗೆ ಪದ ಹೇಳಬೇಕು, ಅವಳು ಸಂತೋಷಪಡುವುದನ್ನು ನೋಡಬೇಕು, ಎಂದು ಇವನಿಗೆ ಚಪಲ. ಕೇರಿಯ ಜನಕ್ಕೆ ಪದ ಹೇಳಿ ಅವರೆಲ್ಲಾ ಹೊರಟುಹೋದ ಮೇಲೆ ಅಂಜಪ್ಪ ಈ ಹುಡುಗಿಯ ಮನೆ ಬಾಗಿಲಿನ ಮುಂದೆ ಕುಳಿತು ಎಲೆ ಅಡಕೆ ಹಾಕಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿನ ಮೇಲೆ ಹುಡುಗಿ ಬಾಗಿಲ ಬಳಿ ಬಂದು "ಜೋಗ್ಯಪ್ಪ ನೀನು ಈ ಊರಿಂದ ಕೆಡೆದು ಹೋಗುವಾಗ ಹೀಗೇ ಬಂದು ಹೋಗು” ಎಂದಳು. ಅಂಜಪ್ಪ “ಯಾಕಮ್ಮಾನಾನು ಈಗ ಹೊರಡುವನೆ” ಎಂದ. ಅವಳು “ನಿನ್ನ ಪದ ಕೇಳಿ ಬಹಳ ಸಂತೋಷ ಆಯ್ತು. ನಿನಗೇನಾದರೂ ಕೊಡೋಣಾಂತ ಬಹಳ ಸಲಾ ಅಂದುಕೊಂಡೆ. ಅಂದರೆ ನೀನು ಅದನ್ನು ತೆಕ್ಕೊಂಡು ಬೇಗನೆ ಹೊರಟುಬಿಡಬೇಕು. ನಮ್ಮತ್ತೆಗೆ ತಿಳಿದರೆ ತಂಟೆ ಮಾಡ್ತಾಳೆ” ಎಂದಳು. ಅಂಜಪ್ಪನಿಗೆ ತೆಗೆದುಕೊಳ್ಳುವುದಕ್ಕೆ ಭಯ. ಒಲ್ಲೆ ಎನ್ನುವುದಕ್ಕೆ ಇಷ್ಟವಿಲ್ಲ. ಆದರೆ ಇವನು ಏನು ಹೇಳುವುದಕ್ಕೂ ಮುಂದಾಗಿ ಹುಡುಗಿ ಒಳಗೆ ಹೋಗಿ ಅಲ್ಲಿಂದ “ಜೋಗ್ಯಪ್ಪಾ, ಇಲ್ಲಿ ಬಾ” ಎಂದಳು. ಇವನು ಒಳಗೆ ಹೋದ. ಹುಡುಗಿ ಒಂದು ಕೋಳಿಯನ್ನು ಇವನ ಜೋಳಿಗೆ ಒಳಕ್ಕೆ ಹಾಕಿದಳು. “ಹೊರಗು, ಹೊರಟ್ಟೋಗು” ಎಂದಳು. ಏನು ಎತ್ತ ಎಂದು ಬಹಳ ಯೋಚನೆ ಮಾಡದೆ ಅಂಜಪ್ಪ ಹೊರಟುಹೋದ. ಈಗ ಯಾರಾದರೂ ಹಿಡಿದರೆ ಏನು ಗತಿ ಎಂತ ಅವನಿಗೆ ಎದೆ ಡವಡವ ಬಡಿದುಕೊಳ್ಳುತ್ತಿತ್ತು. ಹುಡುಗಿ ಒಳಗಿಂದ “ಭದ್ರ ಜೋಗ್ಯಪ್ಪಾ, ನಾನು ಕೊಟ್ಟೆ ಎಂತ ಯಾರಿಗಾದರೂ ಹೇಳೀಯ” ಎಂದು ಹೇಳಿದಳು. ಅಂಜಪ್ಪ ಏನೂ ಮಾತಾಡದೆ ಬೇಗನೆ ಹೊರಟುಬಿಟ್ಟ. ಊರಿನ ಹೊರಗಡೆ ಅರ್ಧ ಮೈಲಿ ದೂರದಲ್ಲಿ ಒಂದು ಭಾವಿ. ಅಲ್ಲಿಯವರೆಗೆ ಒಂದೇ ಸಮ ನಡೆದು ಒಂದು ಮರದ ನೆರಳಲ್ಲಿ ಕುಳಿತುಕೊಂಡು ಈ ನಡೆದ ಸಮಾಚಾರವನ್ನು ನೆನೆಯುತ್ತಾ ಎಲೆ ಅಡಕೆ ಮೆಲ್ಲುತ್ತಿದ್ದ. 

ಅಂಜಪ್ಪನಿಗೆ ಇದರ ಹಾಗೆ ಆ ಮೊದಲು ಆಗಿರಲಿಲ್ಲ. ಅವನಿಗೆ ತಿರುಗಿ ಹಾಗಾಗಬಾರದು ಎನ್ನಿಸಿತು. ಕೋಳಿ ಏನೋ ಒಳ್ಳೆ ಪದಾರ್ಥವೇ. ಅದನ್ನು ಜೋಗಿಗೆ ಸುಮ್ಮನೆ ಯಾರು ಕೊಡಬೇಕು ? ಆದರೆ ಕಂಡ ಹಾಗೆ ಕೊಡೋ ಭಿಕ್ಷ ಒಂದು ಮಾದರಿ. ಅದರಲ್ಲಿ ಮೋಸ ಇಲ್ಲ. ಇದರಲ್ಲಿ ಮೋಸ ಸೇರಿಹೋಯಿತು. ಅಂಜಪ್ಪನಿಗೆ ಆ ಹುಡುಗಿಯ ವಿಷಯದಲ್ಲಿ ಅಚ್ಚುಮೆಚ್ಚಾಗಿತ್ತು. ಎಂಥ ಒಳ್ಳೆಯ ಹುಡುಗಿ, ಎಂಥ ಚೆನ್ನಾದ ಹುಡುಗಿ, ಒಳ್ಳೇ ಮಾಗಿದ ನಿಂಬೇಹಣ್ಣಿನ ಹಾಗೆ ಇದ್ದಳು. ಇಂಥ ಹೆಂಡತೀನ ಮನೇಲಿಟ್ಟುಕೊಂಡು ಅದೇಕೆ ಅವಳ ಗಂಡ ಪೋಲಿ ತಿರುಗುತ ಇದ್ದಾನೆ ಎಂದು ಅವನಿಗೆ ಯೋಚನೆ ಬಂತು. ಪ್ರಪಂಚವೇ ಹೀಗೆ. ಪುಣ್ಯವಂತರಾದರೆ ಪೋಲಾಟ, ಬಡವರಾದರೆ ಕಳ್ಳತನ, 

ಅಂಜಪ್ಪ ಈ ವಿಷಯವನ್ನೆಲ್ಲಾ ಮನಸ್ಸಿನಲ್ಲಿ ತಿರುವಿ ಹಾಕುವುದರಲ್ಲಿ ತಾನು ಅಲ್ಲಿರುವುದು ಕ್ಷೇಮವಲ್ಲವೆನ್ನುವುದನ್ನು ಮರೆತನು. ಸ್ವಲ್ಪ ಹೊತ್ತಿನ ಮೇಲೆ ಯಾರೋ ಒಬ್ಬ ಊರಿನ ಕಡೆಯಿಂದ ಬಂದು ಇವನ ಬಳಿ ನಿಂತು “ಏನು ಜೋಗ್ಯಪ್ಪ ಕುಂತುಕೊಂಡೆ” ಎಂದನು. ಅಂಜಪ್ಪ “ಕುಂತುಕೊಂಡೆ ಅಪ್ಪ” ಎಂದ. ಹಳ್ಳಿಯವನು “ಜೋಳಿಗೆ ತುಂಬಿತೋ” ಎಂದ. ಅಂಜಪ್ಪ “ಸಾಮಾನ್ಯ” ಎಂದ. ಹಳ್ಳಿಯವನು ಇದೇನು ರಾಗೀನೋ ಎಂತ ಜೋಳಿಗೆ ಬಾಯಿ ತೆರೆದು ಅದನ್ನು ಇಣಿಕಿ ನೋಡಿದ. ಅದರಲ್ಲಿ ಕೋಳಿ. ಬಂದವನು “ಇದೇನು ಜೋಗಪ್ಪ ಕೋಳಿ ಅದೆ” ಎಂದ. ಜೋಗಿಗೆ ಎದೆ ಝಗ್ಗೆಂದಿತು. ಅವನು “ಹೌದಪ್ಪ ಅಲ್ಲೊಬ್ಬರ ಮನೆಯಲ್ಲಿ ಕೊಟ್ರು ಎಂದ. ಇನ್ನು ಮಾತಾಡುತ್ತಾ ಕುಳಿತರೆ ಯಾರು ಎತ್ತ ಎಂತ ಚರ್ಚೆ ಬರುವುದೆಂದು ಎದ್ದು ಜೋಳಿಗೆಯನ್ನು ಹಗಲಮೇಲೆ ಹಾಕಿಕೊಂಡು ಹೊರಡಲು ಸನ್ನದ್ದನಾದ. ಈ ಹೊತ್ತಿಗೆ ಊರ ಕಡೆಯಿಂದ ಒಬ್ಬ ವಯಸ್ಸಾದ ಹೆಂಗಸು ಜೊತೆಯಲ್ಲಿ ಯಾವನೋ ಒಬ್ಬನನ್ನು ಕರೆದುಕೊಂಡು ಬೇಗಬೇಗನೆ ಇವರ ಕಡೆಗೆ ಬರುತ್ತಿರುವುದು ಕಂಡಿತು. ಅವರ ಹಿಂದೆ ಸ್ವಲ್ಪ ದೂರದಲ್ಲಿ ಇವನಿಗೆ ಕೋಳಿಯನ್ನು ಕೊಟ್ಟ ಆ ಹೆಣ್ಣು ಬರುತ್ತಿದ್ದಳು. ಅಂಜಪ್ಪನಿಗೆ ಮೊಣಕಾಲು ಹಂಜಿಯ ಹಾಗಾಯಿತು. ಮುಂದೆ ಇಡುವುದಕ್ಕೆ ಹೆಜ್ಜೆಯೇ ಬರಲಿಲ್ಲ. ಇದು ಯಾಕೋ ಅನಾಹುತಕ್ಕೆ ಬಂತು ಎಂದು ಅವನಿಗೆ ಒಳಗೇ ತಿಳಿದುಹೋಯಿತು. ಹಾಗೆಯೇ ಬರುತ್ತಿದ್ದವರ ಕಡೆ ನೋಡುತ್ತ ನಿಲ್ಲಲಾಗಿ ಆ ಹೆಣ್ಣು ದೂರದಿಂದಲೇ ಇವನಿಗೆ ತಾನು ಕೊಟ್ಟ ಮಾತನ್ನು ಹೇಳಬಾರದೆಂದು ಕೈಯಾಡಿಸುತ್ತ ಸನ್ನೆ ಮಾಡಿದಳು. ಆ ಮುದುಕಿ ಹತ್ತಿರಕ್ಕೆ ಬಂದು ಇವನೇ ಏನೇ ಜೋಗಪ್ಪ” ಎಂದು ಕೇಳಿದಳು. ಅವಳ ಜೊತೆಗೆ ಬರುತ್ತಿದ್ದ ಮನುಷ್ಯ ಆ ಊರಿನ ತಳಾರಿ, ಹೌದು ಎಂದು ಅವನು ಹೇಳಿದ. ಮುದುಕಿ ಇವನನ್ನು ಜೋಗಪ್ಪಾ ನಮ್ಮದೊಂದು ಕೋಳಿ ಏನಾದರೂ ಕಂಡ್ಯಾ ನೀನು” ಎಂದು ಕೇಳಿದಳು. ಅಂಜಪ್ಪ ಅದ್ಯಾವುದೋ ಹಾಳು ಕೋಳಿ ಜೋಳಿಗೆಯೊಳಕ್ಕೆ ಬಂದುಬಿಟ್ಟಿದೆ! ನನಗೆ ತಿಳಿಯಲೇ ಇಲ್ಲ. ಈಗ ಈ ಅಯ್ಯ ಹೇಳ' ಎಂದ. ಮೊದಲು ಬಂದಿದ್ದವನು ಯಾರೋ ಕೊಟ್ರು ಅಂದಲ್ಲಪ್ಪೋ' ಎಂದ. “ಅಯ್ಯೋ ನಮ್ಮಪ್ಪ, ಜೋಗಿಗೆ ಒಂದು ಹಿಡಿ ಅಕ್ಕಿ ಹಾಕೋದು ಕಷ್ಟ, ಕೋಳಿ ಕೊಡೋಕೆ ಬಾರಾ” ಎಂದ ಅಂಜಪ್ಪ, ತಳಾರಿ ಬಂದವನು ಜೋಳಿಗೇನ ತೆಗೆದ. ಒಳಗೆ ಕೋಳಿ ಮೂರ್ಧೆಯ ಸ್ಥಿತಿಯಲ್ಲಿ ಬಿದ್ದಿದೆ. ಮುದುಕಿ “ಪರವಾಯಿಲ್ಲ. ಪದ ಹೇಳ್ತಾನೆ ಅಂತ ಮನೆ ಹತ್ರ ಬಿಟ್ಟರೆ ಕೋಳಿ ಹಾರ್ಸೋಕೆ ಮೊದಲು ಮಾಡಿದ” ಎಂದಳು. “ನಡೆ ಊರಿಗೆ ಗೌಡನಿಗೆ ಹೇಳೋಣ, ಚೆನ್ನಾಯ್ತು ಜೋಗಿತನ” ಎಂದು ಇವನನ್ನು ಚೆನ್ನಾಗಿ ಬೈದಳು. ಅಂಜಪ್ಪ “ಅಮ್ಮ ಕೋಳೀನ ನಾನು ಕದೀಲಿಲ್ಲ. ನಿನ್ನ ಕೋಳಿ ಅದರೆ ನೀನು ತಕ್ಕೊಂಡು ಹೋಗು. ನನ್ನ ತಂಟೆಗೆ ಬರಬೇಡ” ಎಂದ. “ಏನಯ್ಯ ಬಹಳ ಸಂಪನ್ನನ ಹಂಗೆ ಮಾತನಾಡ್ತೀಯ. ಕದಿಯದ ಹಂಗಿದ್ದರೆ ಕೋಳಿ ನಿನ್ನ ತಾವು ಹೆಂಗೆ ಬಂತು?” ಎಂದು ಮುದುಕಿ ಹುಡುಗಿಯ ಕಡೆ ತಿರುಗಿ “ಇದು ನಮಲ್ಲವೇನೇ ಕೋಳಿ” ಎಂದಳು. ಹುಡುಗಿ “ಏನೋ ನಮ್ಮದು ಅಲ್ಲ ಅನ್ನೋ ಹಂಗದೆ, ಹೌದು ಅನ್ನೋ ಹಂಗದೆ. ಜೋಗಪ್ಪ ಎಲ್ಲಾದರೂ ಕೊಂಡುಕೊಂಡಿರಬಹುದು” ಎಂದಳು. ತಳಾರಿ “ಇದೆಲ್ಲಾ ಯಾವ ಮಾತು. ಊರ ಗೌಡರ ತಾವ ಹೋಗೋಣ, ಸಮಾಚಾರ ಎಲ್ಲಾ ಹೇಳೋಣ. ಅವರು ನ್ಯಾಯ ಅಂದದ್ದನ್ನು ಮಾಡಿ” ಎಂದ. ಅಂಜಪ್ಪನಿಗೆ ತಪ್ಪಿಸಿಕೊಂಡು ಹೋಗುವುದಕ್ಕೆ ದಾರಿ ತೋರಲಿಲ್ಲ. ಗೌಡನಿಗೋ ತನ್ನ ಮೇಲೆ ಕೋಪ ಇದೆ ಅಂತ ಬಲ್ಲ, ಇದೇನೋ ಗ್ರಹಚಾರ ಬಂತು ಎಂತ ಅವನು ಜೋಳಿಗೇನೂ ಹೊತ್ತುಕೊಂಡು ಅವರ ಜೊತೆಗೆ ಮರಳಿ ಊರಿಗೆ ಹೋದ. ಅಲ್ಲಿ ಆದದ್ದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ಊರಿನಲ್ಲಿ ಅದಕ್ಕೆ ಹಿಂದೆ ಕೋಳಿಗಳನ್ನು ಕಳೆದುಕೊಂಡಿದ್ದವರು, ಕಳೆದುಕೊಳ್ಳದೇ ಇದ್ದವರು, ಎಲ್ಲರೂ ಜೋಗಪ್ಪ ಹಿಂದೆ ಬಂದಿದ್ದ ದಿವಸ ತಮ್ಮದೊಂದು ಕೋಳಿ ಹೋದ ಹಾಗೆ ನೆನಪು ಎಂದರು. ಗೌಡ ಬಂದ: “ಏನೊ ಜೋಗಿ, ಇಷ್ಟು ದಿನ ಹೇಳಿದ್ದು ಪದ ಅಲ್ಲ. ಈಗ ಲಾಕಾಪಿಗೆ ಕಳಿಸ್ತೀನಿ. ಆಗ ಹೇಳು ಪದಾನ” ಎಂದ. ಪೋಲೀಸ್ ಸ್ಟೇಶನ್ ಬಹಳ ದೂರವಿರಲಿಲ್ಲ. ಅಲ್ಲಿಗೆ ಅಪರಾಧಿಯನ್ನು ದಾಗೀನಾ ಸಮೇತ ರಿಪೋರ್ಟಿನೊಂದಿಗೆ ಕಳುಹಿಸಿಕೊಟ್ಟದ್ದಾಯಿತು. ಅಲ್ಲಿ ಹೇಳಿಕೆ ಕೇಳಿಕೆಗಳೆಲ್ಲಾ ಆದವು. ಅಂಜಪ್ಪ ವಿಚಾರಣೆಯ ದಿನ ಕೋರ್ಟಿಗೆ ಹಾಜರಾಗುತ್ತೇನೆ ಅಂತ ಜಾಮೀನಿನ ಮೇಲೆ ಊರಿಗೆ ಬಂದ. 

ವಿಚಾರಣೆ ಆಯಿತು. ವಿಚಾರಣೆಗೆ ಏನಿದೆ? ಮುದುಕಿ ಮನೆಯಿಂದ ಕೋಳಿ ಹೋದದ್ದು ನಿಜ. ಆ ಕೋಳಿಯನ್ನು ಅವಳು ಗುರುತಿಸಿದ್ದಳು. ಅದು ಜೋಗಪ್ಪನ ಹತ್ತಿರ ಇದ್ದದ್ದು ನಿಜ. ಅದನ್ನು ಮೂರು ಜನ ನೋಡಿದ್ದರು. ಮ್ಯಾಜಿಸ್ಟ್ರೇಟರು ಅಂಜಪ್ಪನನ್ನು ನೀನು ಏನು ಹೇಳತೀಯಾ ಎಂತ ಕೇಳಿದರು. 

ಅಂಜಪ್ಪ: ಎಲ್ಲೋ ಬುದ್ಧಿ ನಾನು ಪದಾ ಹೇಳ್ತಾ ಇರಬೇಕಾದ್ರೆ ಕೋಳಿ ಬಂದು ಬೆಚ್ಚಗೆ ಅದೆ ಅಂತ ಜೋಳಿಗೆ ಒಳಗೆ ಸೇರಿಕೊಂಡಿರಬೇಕು. ನನಗೆ ತಿಳೀಲಿಲ್ಲ. ನಾನು ತಂದುಬಿಟ್ಟೆ. 

ಮ್ಯಾಜಿಸ್ಟ್ರೇಟರು: ಏನು ಪುರಾಣ ಹೇಳ್ತಿ ನೀನು, ಕೋಳಿ ಬಂದು ನಿನ್ನ ಜೋಳಿಗೆ ಒಳಗೆ ಕುಳಿತುಕೊಳ್ಳುತ್ತದೆಯಾ? ಸತ್ಯಾ ಹೇಳು. 

ಜೋಗಪ್ಪ: ಮಹಾಸ್ವಾಮಿ ಸತ್ಯ ಹೇಳ್ತಿನಿ. ನೀವು ಹೇಳಿದ ದೇವರ ಮೇಲೆ ಆಣೆ ಮಾಡ್ತೀನಿ. ನಾನು ಕೋಳೀ ಕದೀಲಿಲ್ಲ. 

ಮ್ಯಾಜಿಸ್ಟ್ರೇಟರು: ನೀನು ಕೋಳೀ ಕದೀಲಿಲ್ಲ ಅನ್ನು, ಕೋಳಿ ಏನೋ ಜೋಳಿಗೆಗೆ ತಾನೇ ಬರಲಿಲ್ಲ. ಯಾರಾದರೂ ಕೊಟ್ರೇನೋ. 

ಅಂಜಪ್ಪನಿಗೆ ಆ ಹುಡುಗಿ ಕೊಟ್ಟಳು ಎಂತ ಹೇಳಿಬಿಡಬೇಕು ಎಂತ ನಾಲಗೆ ಕೊನೆಗೆ ಬಂದಿತ್ತು. ಆದರೆ 

ಜೋಗೋರ ಅಂಜಪ್ಪನ ಕೋಳಿ ಕತೆ | ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ 

ಅವಳು ಯಾರಿಗೂ ಹೇಳಬೇಡ ಎಂತ ಹೇಳಿದ್ದದ್ದು, ಆಮೇಲೆ ತನಗೆ ಸನ್ನೆ ಮಾಡಿದ್ದದ್ದು, ಎಲ್ಲಾ ಜ್ಞಾಪಕ ಬಂತು. ಏನೋ ಪಾಪ, ಭ್ರಮೆಯಿಂದ ಒಂದು ಕೋಳಿ ಕೊಟ್ಟಳು, ಅವಳನ್ನು ಯಾಕೆ ಬಿಟ್ಟು ಕೊಡಬೇಕು, ಎಂತ ಯೋಚನೆ ಬಂದು ಆ ಮಾತು ತಡೆಯಿತು. ಏನೂ ಹೇಳದೆ ಸುಮ್ಮನೆ ಇದ್ದನು. ಏನು ಹೇಳೀಯಾ ಎಂತ ಮ್ಯಾಜಿಸ್ಟ್ರೇಟರು ಪುನಃ ಕೇಳಿದರು. 

ಅಂಜಪ್ಪ: ಏನು ಹೇಳಿ ಬುದ್ಧಿ, ಧರ್ಮದ ಧಣಿ. ನಿಜ ಏನು ಅಂತ ನಿಮಗೆ ದೇವರು ತಿಳಿಸಬೇಕು. ನಾನು ಕದಿಯಲಿಲ್ಲ. 

ಮ್ಯಾಜಿಸ್ಟ್ರೇಟರು ಇವನ ಮೇಲೆ ಒಂದು ಚಾರ್ಜು ಅಂತ ಬರೆದು ನಿನ್ನ ಕಡೆ ಸಾಕ್ಷಿಗಳಿದ್ದಾರೆಯೇ ಅಂತ ಕೇಳಿದರು. ಅಂಜಪ್ಪ “ಅಯ್ಯೋ ಮಾಸ್ವಾಮಿ, ನನಗ್ಯಾರು ಸಾಕ್ಷಿ. ದೇವರು ಸಾಕ್ಷಿ” ಎಂದ. ಮ್ಯಾಜಿಸ್ಟ್ರೇಟರು ಕಳ್ಳಾದರೂ ಎಷ್ಟು ನಯವಾಗಿ ಮಾತನಾಡುತ್ತಾನೆ ಎಂತ ಹೇಳಿ ಇಪ್ಪತ್ತು ರೂಪಾಯಿ ಜುಲ್ಮಾನೆ ತಪ್ಪಿದರೆ ಹದಿನೈದು ದಿನ ಸಜಾ ಎಂದು ಶಿಕ್ಷೆ ವಿಧಿಸಿದರು. ಅಂಜಪ್ಪ ಜುಲ್ಮಾನೆ ತೆತ್ತು ಪೆಚ್ಚು ಮುಖ ಹಾಕಿಕೊಂಡು ಊರಿಗೆ ಬಂದ. 

ಇದಾಗಿ ನಾನು ಹೇಳಿದಂತೆ ನಲವತ್ತು ವರ್ಷದ ಮೇಲೆ ಆಗಿದೆ. ಅಂಜಪ್ಪ ಇದನ್ನು ಹೇಳಿ “ಸುಮ್ಮನೆ 'ಮೇಸ್ಟ್ರೀಟ್' ಅಂದ್ರೆ ಏನಾಯ್ತಪ್ಪ, ತಪ್ಪಿಗೆ ಶಿಕ್ಷೆಮಾಡುವುದು, ಸತ್ಯವಂತ ಕಾಪಾಡೋದು, ದೇವರ ಕೆಲ್ಸ. ಆ ಕೆಲ್ಸ ಮನುಷ್ಯನ ಕೈಗೆ ಬಂದಾಗ ಮನುಷ್ಯ ದೇವರ ಹಾಗೆ ನಡಕೋಬೇಕು. ಹೆಚ್ಚು ಕಡಿಮೆ ಆದೀತು ಎಂತ ಭಯದಲ್ಲಿರಬೇಕು. ಇಲ್ಲೀರಾ ಇದ್ರೆ ಆ ಮೇಸ್ಟ್ರೀಟು ಬೇಡಿಹಾಕತೇನಂದರಲ್ಲಾ ಹಂಗೆ ಅನ್ಯಾಯ ಆದಾತು” ಎಂದ. 

ನಾನು: ನೀನು ಹೇಳೋದು ಸರಿ ಅಂಜಪ್ಪ. ಆದರೆ ಏನಾಯ್ತು ಅಂತ ನೀನು ಹೇಳೀರಾ ಇದ್ರೆ ಮೇಲ್ನೋಟರಿಗೆ ತಿಳಿಬೇಕು ಹೇಗೆ ? 

ಅಂಜಪ್ಪ: ಹೇಳೋ ಅಷ್ಟಕ್ಕೆ ನ್ಯಾಯ ಮಾಡೋದಾದ್ರೆ ನಿಮ್ಮಂಥ ಬುದ್ದಿವಂತ್ರು ಏಕೆ ಬೇಕು ? ಸತ್ಯಾವು ಏನು ಎಂತ ತಿಳಕೊಳ್ಳೋದು ಮೇಸ್ಟ್ರೀಟ್ರ ಕೆಲ್ಸ. ಬಿಡು. 

ನಾನು: ಹುಡುಗಿ ಮರ್ಯಾದೆ ಉಳಿಸಬೇಕೂ ಅಂತ ನೀನೇ ಜುಲ್ಮಾನೆ ಕೊಟ್ಟ ಹಂಗಾಯ್ತು. ಒಳ್ಳೆಯದಾಯ್ತು 

ಅಂಜಪ್ಪ: ಅಯ್ಯೋ ಅದೇನ ಕೇಳ್ತಿಯಾ? ಅವಳು ಒಬ್ಬವನ ಕೂಡ ನ್ಯಾಸ ಮಾಡಿಕೊಂಡಿದ್ದಳಂತೆ. ಎರಡು ಮೂರು ಸಲ ಅವನಿಗೆ ಕೋಳಿ ಕೊಟ್ಟಿದ್ದಳಂತೆ. ಅವರತ್ತೆ ಕೋಳಿ ಏನಾದುವು, ಕೋಳಿ ಏನಾದುವು, ಎಂತ ಕೇಳ್ತಾ ಇದ್ದಂತೆ. ಯಾರೋ ಕದ್ದಿರಬೇಕು ಅಂತ ಹುಡುಗಿ ಹೇಳ್ತಾ ಇದ್ದು, ಆ ಅತ್ತೆಗೆ ನಂಬಕಾ ಇಲ್ಲ. ಒಂದು ಸಲ ಕೋಳಿ ಹೋದ ಹೊತ್ತಾಗೆ ಇಂಥಾವರ ಕೈಯಾಗೆ ಇದೆ ಅಂತ ತೋರಿಸಿಕೊಟ್ರೆ ತನ್ನ ಮೋಸ ಮುತ್ತಾದೇ ಅಂತ ಇದೆಲ್ಲಾ 

ಹುಡುಗೀನೇ ಮಾಡಿದಳೂ ಅಂತ ನನಗೆ ಆಮೇಲೆ ತಿಳಿಯಿತು. 

ರಂಗಪ್ಪ: ಏನು ? ಹುಡುಗಿ ನಿನಗೆ ಕೋಳಿ ಕೊಟ್ಟು ಅತ್ತೆಗೆ ತಾನೇ ಹೇಳಿಬಿಟ್ಟೆ? 

ಅಂಜಪ್ಪ: ಊಂ, ಹಂಗೇ ಆಯ್ತು ಅಂತನ್ನು, ಅತ್ತೆ ಬಂದು, ಕೋಳಿ ಎಲ್ಲಿ ಅಂದ್ಲು, ಸೊಸೆ, ನನಗೆ ಗೊತ್ತಿಲ್ಲ, ಅಂದಳು. ಅತ್ತೆ, ಹಾಗಾದ್ರೆ ಏನಾಗಿರಬೇಕು, ಇಲ್ಲಿ ಯಾರಾದರೂ ಬಂದಿದ್ರಾ, ಅಂತ ಕೇಳಿದಳು. ಸೊಸೆ, ನನಗೆ ಗೊತ್ತಿಲ್ಲಾ, ಅಂದ್ಲು: ಆಮೇಲೆ ಯಾರೋ ಜೋಗಪ್ಪ ಬಂದಿದ್ದ, ಅಂದ್ಲು, ಪಕ್ಕದ ಮನೆಯವನು, ಹೌದು ಜೋಗಿ ಇದ್ದಾಗಿಂದ ಬಹು ಬಿದ್ದೆ ಹೋಗ್ತಾ ಇದ್ದ, ಅಂದ. ಸರಿ, ಕಾಲ ಎಲ್ಲ ಸೇರು, ನಾನು ಸಿಕ್ಕಿಬಿದ್ದೆ. 

ರಂಗಪ್ಪ “ಆಮೇಲೆ ಹೋಗಿ ಹುಡುಗೀನ ಹೀಗೆ ಮಾಡಬಹುದೇ ಅಂತ ಕೇಳಲಿಲ್ಲವೇ ?” ಅಂದ. ಅಂಜಪ್ಪ “ಅಪ್ಪು, ನೀವೆಲ್ಲಾ ಹೈು, ನಾನು ಮುದುಕ್ಕಾದೆ. ನನ್ನ ಪ್ರಾಯದ ಮಾತು ಈಗ ಯಾಕ ಕೇಳೀಯಾ ? ಹೋದ್ವಿ. ಕೇಳಿದ್ವಿ, ಎಲ್ಲಾ ಆಯಿತು” ಎಂದ. ನಾವು ವಿವರವನ್ನು ಕೇಳಲಿಲ್ಲ. ಕೊನೆಗೆ ರಂಗಪ್ಪ, “ಸರಿ ಬಿಡು, ನಿನ್ನ ನನ್ನ ಹತ್ತಿರೇನಾದರೂ ತಪ್ಪಿತಸ್ಥ ಅಂತ ತಂದ್ರೆ ಸತ್ಯ ಏನು ಅಂತ ಸರಿಯಾಗಿ ತಿಳಿದುಕೊಂಡು ನಿನ್ನ ಬಿಟ್ಟುಬಿಡ್ತೀನಿ” ಅಂದ. “ಅಂಜಪ್ಪ ಇನ್ನ ನಾನು ನರಮನುಸನ ಮುಂದೆ ಏನು ಬಂದನು, ಬಿಡಪ್ಪು. ಇನ್ನು ನನ್ನ ಮೇಸ್ಟ್ರೀಟು ನಮ್ಮಪ್ಪ, ತಿರುಪತಿ ವೆಂಕಟರಮಣಸ್ವಾಮಿ, ಹೋಗೋಕು, ನಿಲ್ಲಬೇಕು; ಏನೋ ಅನ್ನೋ ಹೊತ್ತೆ ತಪ್ಪಾಯ್ತು ಅಂತ ಕಾಲಿಗೆ ಬೀಳಬೇಕು. ನಮ್ಮನ್ನು ಕಾಪಾಡ್ತಾನೆ' ಎಂದ. ನಾವು ಸುಮ್ಮನೆ ಇದ್ದೆವು. ಅಂಜಪ್ಪ ಇನ್ನೂ ಸ್ವಲ್ಪ ಹೊತ್ತು ಕುಳಿತಿದ್ದು “ಅಪ್ಪ ನೀನು ಮೇಟಾದ್ದಕ್ಕೆ ನನ್ಗ ಒಸಿ ಎಲೆ ಅಡಕೆ ಕೊಡಲೊಲ್ಲೆಯಾ?” ಎಂದ. ರಂಗಪ್ಪ ಹುಡುಗರನ್ನು ಕರೆದು ಅವನಿಗೆ ಸ್ವಲ್ಪ ಎಲೆ ಅಡಕೆ ಕೊಡಿಸಿದ. ಅಂಜಪ್ಪ ಅದನ್ನು ತೆಗೆದುಕೊಂಡು, “ನಾನು ಹೇಳಿದ್ದು ಜ್ಞಾಪಕ ಇಲ್ಲಿ. ಇನ್ನ ಬರೋಣಾ' ಎಂದು ಹೇಳಿ ಹೊರಟುಹೋದ, 


Comments

Popular posts from this blog

Team Prakasam

Team Prakasam during one of it's Pot-luck Party on 17-03-2013 ( JOIN US HERE ) We at Prakasam  believe in team work and building a strong team.  All the work Prakasam has done in the past decade ( Kala Krushi Page ) has been possible because of the selfless and unconditional support of its team members.  Where there is a team there would be work related to performing arts and also many more merry gatherings, parties, team holidays etc.  LOOK AT US WHEN WE PLAY & WHEN WE WORK . We are listing the official ones below to enthuse and entertain committed performing arts lovers to join us as volunteers.  Join us by applying to our Production Internship Programme  or by answering 10 simple questions, CLICK HERE . All our Crazy Empathy Videos (even before there was tiktok or reels) Annual Trip 2023 Secret Santa+6 Birthdays+Mini Potluck on 25 Dec 2013 Niswarga trip post KHKS4 fest, 19 April 2013 IPL6 Empathy a Jumping J...

Katha Sangama "Bouquet of Stories"

Katha Sangama "Bouquet of Stories"  There has been a trend of short plays in the modern time of timelessness. We are so used to instant food, job, friendship, money we are also bombarded with requests for short plays. We now have successfully prepared the “Bouquet of Stories” exclusively for you. Marking the 100th birth anniversary of Kodagina Gowramma , the gallant feminist writer at her times (1912-1939) we are staging her short story too as part of this festival.  The play is in Kannada and the exquisite selection of the stories will make you want more. With eight Jnanapeth Awards and stalwarts to choose from we had to read more than 120 short stories written between early 1930’s to 2011 to arrive at this unique bouquet. We sincerely hope that you will have a blast watching this as we have creating this performance piece for you. We enclose a small brief below of the stories to give you a better idea of the performances. We have interwoven six stories, running around the ...

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...